ADVERTISEMENT

ರಮೇಶ ಜಾರಕಿಹೊಳಿ ಮನವೊಲಿಸಲು ಸತೀಶ ಜಾರಕಿಹೊಳಿ ಹರಸಾಹಸ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2018, 17:47 IST
Last Updated 26 ಡಿಸೆಂಬರ್ 2018, 17:47 IST

ಬೆಳಗಾವಿ: ಸಚಿವ ಸ್ಥಾನ ಕಳೆದುಕೊಂಡು ಅತೃಪ್ತರ ಗುಂಪಿನಲ್ಲಿ ಗುರುತಿಸಿಕೊಂಡಿರುವ ಶಾಸಕ ರಮೇಶ ಜಾರಕಿಹೊಳಿ ಅವರ ಮನವೊಲಿಸಲು, ಅವರ ಸೋದರ ಸಚಿವ ಸತೀಶ ಜಾರಕಿಹೊಳಿ ಹರಸಾಹಸ ಪಡುತ್ತಿದ್ದಾರೆ.

ಅವರನ್ನು ಮನವೊಲಿಸುವ ಜವಾಬ್ದಾರಿಯನ್ನು ಪಕ್ಷದ ವರಿಷ್ಠರು ಸಹೋದರ ಸತೀಶಗೇ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಬುಧವಾರವೂ ರಮೇಶ ಮಾಧ್ಯಮದವರ ಸಂಪರ್ಕಕ್ಕೆ ಲಭ್ಯವಾಗಲಿಲ್ಲ. ಗೋಕಾಕದ ಮನೆಯಲ್ಲೂ ಇರಲಿಲ್ಲ. ಅಜ್ಞಾತ ಸ್ಥಳಕ್ಕೆ ತೆರಳಿರುವ ಅವರು, ಮೊಬೈಲ್‌ ಫೋನನ್ನೂ ಸ್ವಿಚ್‌ ಆಫ್‌ ಮಾಡಿಕೊಂಡಿದ್ದಾರೆ. ಸಹೋದರ ಸತೀಶ ಜಾರಕಿಹೊಳಿ ಅವರ ಸಂಪರ್ಕಕ್ಕೂ ಲಭ್ಯವಾಗುತ್ತಿಲ್ಲ ಎನ್ನಲಾಗಿದೆ. ಇದರಿಂದಾಗಿ ಸಹೋದರರ ನಡುವೆ ಬುಧವಾರ ಮಾತುಕತೆ ನಡೆದಿಲ್ಲ.

ADVERTISEMENT

ಬೆಳಿಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ್ದ ಸಚಿವರು, ಬುಧವಾರ ಸಂಜೆ ರಮೇಶ ಜೊತೆಗೆ ಮಾತುಕತೆ ನಡೆಸುವುದಾಗಿ ಹೇಳಿದ್ದರು. ಆದರೆ, ಮಾತುಕತೆ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ. ಅವರಿಗೆ ಆಪ್ತರಾಗಿರುವ ಶಾಸಕರ ಮೂಲಕ ಮನವೊಲಿಸುವ ಹಾಗೂ ಇದಕ್ಕಾಗಿ ಇನ್ನಿಬ್ಬರು ಸಹೋದರರಾದ ಶಾಸಕ ಬಾಲಚಂದ್ರ ಜಾರಕಿಹೊಳಿ, ಲಖನ್‌ ಜಾರಕಿಹೊಳಿ ಅವರನ್ನೂ ಬಳಸಿಕೊಳ್ಳುವ ಸೂತ್ರವನ್ನು ಸತೀಶ ಹೆಣೆದಿದ್ದಾರೆ ಎನ್ನಲಾಗುತ್ತಿದೆ.

ಗುರುವಾರ (ಡಿ. 27)ಅಥಣಿಗೆ ತೆರಳಿ, ರಮೇಶ ಬೆಂಬಲಿಗರು, ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹಾಗೂ ಅಥಣಿ ಶಾಸಕ ಮಹೇಶ ಕುಮಠಳ್ಳಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.