ಹಾಸನ: ‘ಶ್ರವಣಬೆಳಗೊಳದಲ್ಲಿ ನಡೆಯಲಿರುವ ಅಖಿಲ ಭಾರತ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಲು ಸಾಹಿತಿ ದೇವನೂರ ಮಹದೇವ ಅವರು ಒಪ್ಪಿಕೊಳ್ಳಲೂಬಹುದು. ನಾವು ಇನ್ನೂ ಅವರ ಸಂಪರ್ಕದಲ್ಲಿದ್ದೇವೆ’ ಎಂದು ಕನ್ನಡ ಸಾಹಿತ್ಯ ಪರಿಷತ್ ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್.ಎಲ್. ಜನಾರ್ದನ ಹೇಳಿದರು.
ಸಮ್ಮೇಳನದ ಅಂಗವಾಗಿ ಬುಧವಾರ ನಡೆದ ಸಭೆಯಲ್ಲಿ ಕೆಲವು ಸಾಹಿತಿಗಳು ದೇವನೂರ ಅವರ ನಿಲುವನ್ನು ಸಮರ್ಥಿಸಿಕೊಂಡರು. ಇದಕ್ಕೆ ಜನಾರ್ದನ್ ಮೇಲಿನಂತೆ ಪ್ರತಿಕ್ರಿಯೆ ನೀಡಿದರು. ‘ಏನೇ ಇದ್ದರೂ 19ರಂದು ನಡೆಯಲಿರುವ ಪರಿಷತ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜಿಲ್ಲಾ ಘಟಕದಿಂದ ನಾವು ದೇವನೂರ ಹೆಸರನ್ನೇ ಸೂಚಿಸಲಿದ್ದೇವೆ ಎಂದರು.
ಲೇಖಕ ಚಂದ್ರಕಾಂತ ಪಡೇಸೂರ ಮಾತ-ನಾಡಿ, ‘ಸಮ್ಮೇಳನದ ಅಧ್ಯಕ್ಷರಾದವರು ರಾಜ್ಯದೆಲ್ಲೆಡೆ ಸಂಚರಿಸಿ ಜಾಗೃತಿ ಮೂಡಿಸಲು ಸಾಧ್ಯವಾಗುತ್ತದೆ. ಮಹದೇವ ಅಧ್ಯಕ್ಷ ಸ್ಥಾನ ತಿರಸ್ಕರಿಸುವ ಬದಲು, ಅಧ್ಯಕ್ಷರಾಗಿ ನಂತರದ ದಿನಗಳಲ್ಲಿ ಭಾಷಾ ಮಾಧ್ಯಮದ ಬಗ್ಗೆ ಹೋರಾಟ ನಡೆಸಬಹುದಾಗಿತ್ತು’ ಎಂದರು.
‘ಆ ನಿಲುವು ಸರಿಯಲ್ಲ. ಎಲ್. ಬಸವರಾಜು ಅಂಥ ಪ್ರಯತ್ನ ಮಾಡಿದ್ದರು. ಆದರೆ, ಅವರ ಹೋರಾಟಕ್ಕೆ ಸರ್ಕಾರ ಕವಡೆಕಾಸಿನ ಕಿಮ್ಮತ್ತು ಕೊಟ್ಟಿರಲಿಲ್ಲ. ಅಂಥ ಹೋರಾಟ ಯಾವ ಪರಿಣಾಮ ಉಂಟು ಮಾಡದು ಎಂದು ಕೆಲವರು ಎತ್ತರದ ದನಿಯಲ್ಲಿ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.