ADVERTISEMENT

‘ಅಮ್ಮ ಪ್ರಶಸ್ತಿ’ಗೆ ಐದು ಕೃತಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2013, 19:30 IST
Last Updated 15 ನವೆಂಬರ್ 2013, 19:30 IST

ಗುಲ್ಬರ್ಗ: ಜಿಲ್ಲೆಯ ಸೇಡಂ ತಾಲ್ಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಪ್ರತಿ­ವರ್ಷ ಕೊಡುವ ರಾಜ್ಯಮಟ್ಟದ ಅಮ್ಮ ಪ್ರಶಸ್ತಿಗೆ ಈ ಸಲ ಐದು ಲೇಖಕರ ಕೃತಿಗಳನ್ನು ಆಯ್ಕೆ ಮಾಡಲಾಗಿದೆ.

ಹಿರಿಯ ಕವಿ ಬಿ.ಆರ್.ಲಕ್ಷ್ಮಣರಾವ ಅವರ ‘ಮಣಿಮಾಲೆ’ (ವ್ಯಕ್ತಿಚಿತ್ರ ಬರಹ­ಗಳ ಸಂಕಲನ), ‘ಪ್ರಜಾವಾಣಿ’ ಸಹ ಸಂಪಾದಕಿ ಸಿ.ಜಿ.ಮಂಜುಳಾ ಅವರ ‘ಮಾತುಕತೆ’ (ಲೇಖನಗಳ ಸಂಕಲನ), ಮಕ್ಕಳ ಕವಿ ರಾಜಶೇಖರ ಕುಕುಂದಾ ಅವರ ‘ಪುಟಾಣಿ ಪ್ರಾಸ­ಗಳು’ (ಮಕ್ಕಳ ಕವಿತೆಗಳು), ಸಂಶೋ­ಧಕಿ ಡಾ.ಜಯದೇವಿ ಧಾರವಾಡ ಅವರ ‘ವಚನ ಸಂಗೀತ ರತ್ನ ಪಂಡಿತ ಸಿದ್ದರಾಮ ಜಂಬಲದಿನ್ನಿ’ (ಸಂಶೋ­ಧನಾ ಕೃತಿ), ಸೃಜನ್ ಹೊಸಪೇಟೆ ಅವರ ‘ನನ್ನಿಷ್ಟ (ಅನುವಾದ) ಕೃತಿಗ­ಳನ್ನು ೧೩ನೇ ವರ್ಷದ ಅಮ್ಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಈ ಬಾರಿ ಒಟ್ಟು ೩೧೬ ಕೃತಿಗಳು ಬಂದಿದ್ದವು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಸಂಸ್ಥಾ­ಪಕ ಮಹಿಪಾಲ ರೆಡ್ಡಿ ಮುನ್ನೂರ್ ಹೇಳಿದರು.

ಪ್ರಶಸ್ತಿಯು ತಲಾ ₨೫೦೦೦ನಗದು ಪುರಸ್ಕಾರ, ನೆನಪಿನ ಕಾಣಿಕೆ, ಪ್ರಮಾಣ ಪತ್ರ ಮತ್ತು ಸತ್ಕಾರ ಒಳಗೊಂಡಿದೆ.
ನ.೨೬ರಂದು  ಸಂಜೆ ೫.೩೦ಕ್ಕೆ ಸೇಡಂ ಶ್ರೀ ಪಂಚಲಿಂಗೇಶ್ವರ ದೇವಾಲ­ಯದ ಶಾಂಭವಿ ರಂಗಮಂಟಪದಲ್ಲಿ  ನಡೆಯುವ ಸಮಾರಂಭದಲ್ಲಿ  ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಅಮ್ಮ ಗೌರವ ಪುರಸ್ಕಾರ: ನಾಡು-ನುಡಿಗೆ ನೀಡಿದ ಕೊಡುಗೆ  ಗುರುತಿಸಿ ಮೂರು ವರ್ಷಗಳಿಂದ ‘ಅಮ್ಮ ಗೌರವ ಪುರಸ್ಕಾರ’ ನೀಡಲಾ­ಗುತ್ತಿದೆ. ಈ ಬಾರಿಯ ಪುರಸ್ಕಾರಕ್ಕೆ ಹೋರಾಟ­ಗಾರ, ಮಾಜಿ ಸಚಿವ ವೈಜನಾಥ ಪಾಟೀಲ, ಹಿರಿಯ ಲೇಖಕ ಎಸ್.ಜಿ.ಸಿದ್ದರಾಮಯ್ಯ ತುಮಕೂರು, ಲೇಖಕಿ ಬಾನು ಮುಷ್ತಾಕ್ ಹಾಸನ, ಪ್ರಕಾಶಕ ಪ್ರಕಾಶ ಕಂಬತ್ತಳ್ಳಿ ಬೆಂಗ­ಳೂರು ಮತ್ತು  ಸೇಡಂನ ಡಾ.ಶಾಂತವೀರ ಸುಂಕದ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.