ADVERTISEMENT

‘ದೇಶದ ಅಭಿವೃದ್ಧಿಗೆ ಮೋದಿ ಮಾದರಿ’

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 10:11 IST
Last Updated 23 ಸೆಪ್ಟೆಂಬರ್ 2013, 10:11 IST

ಮುಡಿಪು: ಯುಪಿಎ ಸರ್ಕಾರ ದೇಶದಲ್ಲಿ ಆಡಳಿತಕ್ಕೆ ಬಂದ ನಂತರ ದೇಶದ ಅಭಿವೃದ್ಧಿ ಕುಂಠಿತಗೊಂಡಿದೆ. ಪ್ರತಿಯೊಂದು ವಸ್ತುವಿಗೂ ಬೆಲೆ ಹೆಚ್ಚಿ ಜನಸಾಮಾ­ನ್ಯರು ಜೀವನ ನಡೆಸುವುದೇ ಕಷ್ಟವಾಗಿದೆ. ದೇಶದ ಜನರು ಬದಲಾವಣೆ ಬಯಸಿದ್ದಾರೆ. ಗುಜರಾತನ್ನು ದೇಶದ ಮಾದರಿ ರಾಜ್ಯವನ್ನಾಗಿ ಮಾಡಿದ ನಮ್ಮೆಲ್ಲರ ನೆಚ್ಚಿನ ನಾಯಕ ನರೇಂದ್ರ ಮೋದಿ ಮುಂಬರುವ ಚುನಾವಣೆಯಲ್ಲಿ ಪ್ರಧಾನಿಯಾಗಿ ಆಯ್ಕೆಯಾಗಿ ದೇಶವನ್ನು ಅಭಿವೃದ್ದಿಯತ್ತ ಕೊಂಡೊ­ಯ್ಯಲಿದ್ದಾರೆ. ನಾವೆಲ್ಲರೂ ನರೇಂದ್ರ ಮೋದಿಯನ್ನು ಬೆಂಬಲಿಸೋಣ ಎಂದು ಬಿಜೆಪಿ ಮುಖಂಡ ಟಿ.ರಾಜಾರಾಂ ಭಟ್ ಅವರು ಕರೆ ನೀಡಿದರು.

ಮುಡಿಪುವಿನಲ್ಲಿ ಭಾನುವಾರ ’ನಮೋ ಬ್ರಿಗೇಡ್‌’ ಮುಡಿಪು ವತಿಯಿಂದ ನರೇಂದ್ರ ಮೋದಿಯವರ ಪ್ರಚಾರಾರ್ಥವಾಗಿ ನಡೆದ ಬೃಹತ್ ವಾಹನ ಜಾಥಾವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮೋದಿಯವರು ಮುಂಬರುವ ಚುನಾವಣೆಯನ್ನು ಬಡಜನರ ಸುಂದರ ಕನಸುಗಳ ಚುನಾವಣೆ, ಅಭಿವೃದ್ದಿಯ ಚುನಾವಣೆ ಎಂದು ಈಗಾಗಲೇ ಘೋಷಿಸಿದ್ದಾರೆ. ಯುಪಿಎ ಸರ್ಕಾರ ಮೋದಿಯ ಬಗ್ಗೆ ಅಪಪ್ರಚಾರ ಮಾಡುತ್ತಾ ಬಂದರೂ ಇವತ್ತು ಮೋದಿಯ ಶಕ್ತಿ ಏನು ಎಂಬುದು ಜಗತ್ತಿಗೇ ತಿಳಿದಿದೆ ಎಂದು ಅವರು ಹೇಳಿದರು.

ವಾಹನ ಜಾಥಾದ ನೇತೃತ್ವ ವಹಿಸಿದ್ದ ಜಿಲ್ಲಾ ಪಂ­ಚಾಯಿತಿ ಸದಸ್ಯ ಸಂತೋಷ್ ಕುಮಾರ್ ಬೋಳಿ­ಯಾ­ರ್  ಪ್ರಾಸ್ತಾವಿಕವಾಗಿ ಮಾತ­ನಾ­ಡಿದರು.

ಮಂಗಳೂರು ವಿದಾನಸಭಾ ಕ್ಷೇತ್ರದ ಬಿಜೆಪಿಯ ಅಧ್ಯಕ್ಷರಾದ ಚಂದ್ರಹಾಸ್, ಗಾಂಧೀಜಿ ರಾಮ­ರಾಜ್ಯದ ಕನಸು ನನಸಾಗಲು, ದೇಶದಲ್ಲಿ ನಾವೆ­ಲ್ಲರೂ ಗೌರವದಿಂದ ಬದುಕ ಬೇಕಾದರೆ ಮೋದಿ­ಯವರುಈ ದೇಶದ ಪ್ರಧಾನಿಯಾದರೆ ಮಾತ್ರ ಸಾದ್ಯ ಎಂದು ಹೇಳಿದರು.
ಮಾಧ್ಯಮವರ ಸಮೀಕ್ಷೆಯ ಪ್ರಕಾರವೇ ಮುಂದಿನ ಚುನಾವಣೆಯಲ್ಲಿ ಮೋದಿಯವರು ಗೆಲ್ಲುವುದು ನಿಶ್ಚಿತ ಎಂದು ಮಾಜಿ ಶಾಸಕ ಜಯರಾಮ ಶೆಟ್ಟಿ ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯಿತಿ ಸದಸ್ಯ ಸತೀಶ್ ಕುಮಾರ್ ಕುಂಪಲ, ಬಿಜೆಪಿಯ ಮುಖಂಡರಾದ ಚಂದ್ರಹಾಸ ಅಡ್ಯಂತಾಯ, ಸೇಸಪ್ಪ ಪೂಜಾರಿ, ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿಯ ಕಾರ್ಯದರ್ಶಿ ಮೋಹನದಾಸ್ ಶೆಟ್ಟಿ, ತಾ.ಪಂ.ಸದಸ್ಯ ಯಶವಂತ ಸಜಿಪ, ಜಗದೀಶ್ ಆಳ್ವ, ರಾಜೇಶ್ ಶೆಟ್ಟಿ ಪಜೀರುಗುತ್ತು, ಬಾಳೆಪುಣಿ ಗ್ರಾಮ ಪಂಚಾ­ಯಿತಿಯ ಗಿರೀಶ್ ಮತ್ತಿತರರು  ಭಾಗವಹಿಸಿದ್ದರು.

ಬೃಹತ್ ಬೈಕ್ ರ್‍ಯಾಲಿಯು ಮುಡಿಪುವಿನಿಂದ ಮು­ದುಂ­ಗಾರು ಕಟ್ಟೆ, ಹೂಹಾಕುವ ಕಲ್ಲು, ಮೊಂಟೆ­ಪದವು, ಕಂಬಳ ಪದವು ಹಾಗೂ ಬೋಳಿಯಾರ ಮಾರ್ಗವಾಗಿ ಮುಡಿಪುವರೆಗೆ ನಡೆಯಿತು. ಬಿಜೆಪಿ ನೂರಾರು ಕಾರ್ಯಕರ್ತರು ಭಾಗವಹಿಸಿ ಮೋದಿಯ ಪರವಾಗಿ ಘೋಷಣೆ ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.