ADVERTISEMENT

‘ಭ್ರಷ್ಟ ಅಭ್ಯರ್ಥಿಗಳ ಪರಾಭವಕ್ಕೆ ಶೀಘವೇ ಜಾಗೃತಿ ಅಭಿಯಾನ’

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2014, 19:30 IST
Last Updated 8 ಮಾರ್ಚ್ 2014, 19:30 IST

ಧಾರವಾಡ: ‘ಮುಂಬರುವ ಲೋಕಸಭಾ ಚುನಾ­ವಣೆಯಲ್ಲಿ ಭ್ರಷ್ಟ ಅಭ್ಯರ್ಥಿ­ಗಳನ್ನು ಸೋಲಿಸುವಂತೆ ಮತದಾರರಲ್ಲಿ ಜಾಗೃತಿ ಮೂಡಿಸಲು ಅಭಿಯಾನ ಆರಂಭಿ­ಸ­­ಲಾಗುವುದು. ಈ ಚುನಾ­ವಣೆ­ಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿ­ಸುವ ಭ್ರಷ್ಟ­ರನ್ನು ಗುರಿಯಾಗಿಸಿಕೊಂಡು ಜಾಗೃತಿ ಮೂಡಿಸಲಾಗುವುದು. ಅಂಥ­ವರು ಜೈಲಿಗೆ ಹೋಗುವವರೆಗೆ ಸುಮ್ಮ­ನಿರು­­ವುದಿಲ್ಲ’ ಎಂದು ಸಮಾಜ ಪರಿ­ವರ್ತನಾ ಸಮುದಾಯದ ಅಧ್ಯಕ್ಷ ಎಸ್‌.­ಆರ್. ­ಹಿರೇಮಠ ಹೇಳಿದರು.

‘ಸದ್ಯ ಇಬ್ಬರು ಪ್ರಮುಖ ವ್ಯಕ್ತಿಗಳನ್ನು ಗುರಿ­ಯಾಗಿಸಿಕೊಳ್ಳಲಾಗಿದೆ. ಡಿ.ಕೆ.­ಶಿವ­ಕುಮಾರ್‌ ಹಾಗೂ ಕೇಂದ್ರ ಸಚಿವ ವೀರಪ್ಪ ಮೊಯಿಲಿ. ಶಿವಕುಮಾರ ಅವರ ಕುರಿತು 191 ಪುಟಗಳ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಅವರನ್ನು ಜೈಲಿಗೆ ಕಳಿಸು­­ವವರೆಗೂ ವಿರಮಿಸುವುದಿಲ್ಲ. ಮೊಯಿಲಿ ಕಾರ್ಪೋರೇಟ್‌ ಕಂಪೆನಿಗಳಿಗೆ ಸಹಾಯ ಮಾಡಿ, ಜನಸಾಮಾನ್ಯರ ಬದು­ಕನ್ನು ದುರ್ಭರಗೊಳಿಸುತ್ತಿದ್ದಾರೆ. ಜೈಪಾಲ­ರೆಡ್ಡಿ ಅವರು ಸಚಿವರಾಗಿದ್ದಾಗ ಅಂಬಾನಿ­­ಯಂಥ ಉದ್ಯಮಿಗಳನ್ನು ಹತ್ತಿರ ಕೂಡಾ ಸೇರಿಸಿರಲಿಲ್ಲ. ಅವರ ಜಾಗೆಗೆ ಮೊಯಿಲಿ ಹೇಗೆ ಬಂದರು. ಬಂದ ನಂತರ ಮಾಡಿದ್ದೇನು’ ಎಂದು ಶನಿ­ವಾರ ಪ್ರಶ್ನಿಸಿದರು.

ವಿವಿಧ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಇನ್ನೂ ಅಂತಿಮಗೊಂಡಿಲ್ಲದ ಕಾರಣ, ಮಾ .­18ರಂದು ಬೆಂಗಳೂರಿನಲ್ಲಿ ಸಭೆ ಸೇರಿ ಭ್ರಷ್ಟರ ಪಟ್ಟಿ ಬಿಡುಗಡೆ­ಗೊಳಿ­ಸ­ಲಾಗು­ವುದು. ಉತ್ತಮ ಅಭ್ಯ­ರ್ಥಿ­ಗಳನ್ನು ಬೆಂಬಲಿಸಲಾಗುವುದು ಎಂದರು.

ಅಕ್ರಮ ಗಣಿಗಾರಿಕೆ ಕುರಿತು ನಿವೃತ್ತ ಲೋಕಾ­ಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಸಲ್ಲಿಸಿದ್ದ ವರದಿಯಲ್ಲಿ 12 ಜನರನ್ನು ಹೆಸರಿಸಿದ್ದರು. ಆದರೆ ಸರ್ಕಾರ 6 ಜನರ ವಿರುದ್ಧ ಪ್ರಕರಣ ದಾಖ­ಲಿಸಲು ಅನುಮತಿ ನೀಡಿ, ಕಣ್ಣೊರೆಸುವ ತಂತ್ರ ಮಾಡುತ್ತಿದೆ. ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಡಾ.ಬಸಪ್ಪ ರೆಡ್ಡಿ ಮತ್ತು ಗಂಗಾರಾಮ ಬಡೇ­ರಿಯಾ ಹಾಗೂ ಮೂವರು ಅಧಿ­ಕಾರಿಗಳ ಮೇಲೆ ಮೊಕದ್ದಮೆ ದಾಖ­ಲಿಸಲು ಹಿಂದೇಟು ಹಾಕುತ್ತಿದೆ. ಹೆಗ್ಡೆ ಅವರ ವರದಿಯನ್ನು ಸಂಪೂರ್ಣವಾಗಿ ಅನುಷ್ಠಾನ­ಗೊಳಿಸಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.