ಧಾರವಾಡ: ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭ್ರಷ್ಟ ಅಭ್ಯರ್ಥಿಗಳನ್ನು ಸೋಲಿಸುವಂತೆ ಮತದಾರರಲ್ಲಿ ಜಾಗೃತಿ ಮೂಡಿಸಲು ಅಭಿಯಾನ ಆರಂಭಿಸಲಾಗುವುದು. ಈ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಭ್ರಷ್ಟರನ್ನು ಗುರಿಯಾಗಿಸಿಕೊಂಡು ಜಾಗೃತಿ ಮೂಡಿಸಲಾಗುವುದು. ಅಂಥವರು ಜೈಲಿಗೆ ಹೋಗುವವರೆಗೆ ಸುಮ್ಮನಿರುವುದಿಲ್ಲ’ ಎಂದು ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್.ಆರ್. ಹಿರೇಮಠ ಹೇಳಿದರು.
‘ಸದ್ಯ ಇಬ್ಬರು ಪ್ರಮುಖ ವ್ಯಕ್ತಿಗಳನ್ನು ಗುರಿಯಾಗಿಸಿಕೊಳ್ಳಲಾಗಿದೆ. ಡಿ.ಕೆ.ಶಿವಕುಮಾರ್ ಹಾಗೂ ಕೇಂದ್ರ ಸಚಿವ ವೀರಪ್ಪ ಮೊಯಿಲಿ. ಶಿವಕುಮಾರ ಅವರ ಕುರಿತು 191 ಪುಟಗಳ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಅವರನ್ನು ಜೈಲಿಗೆ ಕಳಿಸುವವರೆಗೂ ವಿರಮಿಸುವುದಿಲ್ಲ. ಮೊಯಿಲಿ ಕಾರ್ಪೋರೇಟ್ ಕಂಪೆನಿಗಳಿಗೆ ಸಹಾಯ ಮಾಡಿ, ಜನಸಾಮಾನ್ಯರ ಬದುಕನ್ನು ದುರ್ಭರಗೊಳಿಸುತ್ತಿದ್ದಾರೆ. ಜೈಪಾಲರೆಡ್ಡಿ ಅವರು ಸಚಿವರಾಗಿದ್ದಾಗ ಅಂಬಾನಿಯಂಥ ಉದ್ಯಮಿಗಳನ್ನು ಹತ್ತಿರ ಕೂಡಾ ಸೇರಿಸಿರಲಿಲ್ಲ. ಅವರ ಜಾಗೆಗೆ ಮೊಯಿಲಿ ಹೇಗೆ ಬಂದರು. ಬಂದ ನಂತರ ಮಾಡಿದ್ದೇನು’ ಎಂದು ಶನಿವಾರ ಪ್ರಶ್ನಿಸಿದರು.
ವಿವಿಧ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಇನ್ನೂ ಅಂತಿಮಗೊಂಡಿಲ್ಲದ ಕಾರಣ, ಮಾ .18ರಂದು ಬೆಂಗಳೂರಿನಲ್ಲಿ ಸಭೆ ಸೇರಿ ಭ್ರಷ್ಟರ ಪಟ್ಟಿ ಬಿಡುಗಡೆಗೊಳಿಸಲಾಗುವುದು. ಉತ್ತಮ ಅಭ್ಯರ್ಥಿಗಳನ್ನು ಬೆಂಬಲಿಸಲಾಗುವುದು ಎಂದರು.
ಅಕ್ರಮ ಗಣಿಗಾರಿಕೆ ಕುರಿತು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಸಲ್ಲಿಸಿದ್ದ ವರದಿಯಲ್ಲಿ 12 ಜನರನ್ನು ಹೆಸರಿಸಿದ್ದರು. ಆದರೆ ಸರ್ಕಾರ 6 ಜನರ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ನೀಡಿ, ಕಣ್ಣೊರೆಸುವ ತಂತ್ರ ಮಾಡುತ್ತಿದೆ. ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಡಾ.ಬಸಪ್ಪ ರೆಡ್ಡಿ ಮತ್ತು ಗಂಗಾರಾಮ ಬಡೇರಿಯಾ ಹಾಗೂ ಮೂವರು ಅಧಿಕಾರಿಗಳ ಮೇಲೆ ಮೊಕದ್ದಮೆ ದಾಖಲಿಸಲು ಹಿಂದೇಟು ಹಾಕುತ್ತಿದೆ. ಹೆಗ್ಡೆ ಅವರ ವರದಿಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.