ADVERTISEMENT

‘ಸುಪ್ರೀಂ’ಗೆ ಪುನರ್‌ ಪರಿಶೀಲನಾ ಅರ್ಜಿ

ಕಲಿಕಾ ಮಾಧ್ಯಮ: ರಾಜ್ಯ ಸರ್ಕಾರದ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 20 ಮೇ 2014, 19:30 IST
Last Updated 20 ಮೇ 2014, 19:30 IST
ಕಲಿಕಾ ಮಾಧ್ಯಮ ವಿವಾದ ಸಂಬಂಧ ಮಂಗಳ­ವಾರ ಬೆಂಗಳೂರಿನಲ್ಲಿ ನಡೆದ ಕಾನೂನು ತಜ್ಞರ ಸಭೆಯಲ್ಲಿ ಭಾಗವಹಿಸಿದ್ದ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಲೋಚನೆ ನಡೆಸಿದರು 	– ಕೆಪಿಎನ್‌ ಚಿತ್ರ
ಕಲಿಕಾ ಮಾಧ್ಯಮ ವಿವಾದ ಸಂಬಂಧ ಮಂಗಳ­ವಾರ ಬೆಂಗಳೂರಿನಲ್ಲಿ ನಡೆದ ಕಾನೂನು ತಜ್ಞರ ಸಭೆಯಲ್ಲಿ ಭಾಗವಹಿಸಿದ್ದ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಲೋಚನೆ ನಡೆಸಿದರು – ಕೆಪಿಎನ್‌ ಚಿತ್ರ   

ಬೆಂಗಳೂರು: ಪ್ರಾಥಮಿಕ ಶಿಕ್ಷಣದಲ್ಲಿ ಕಲಿಕಾ ಮಾಧ್ಯಮ ವಿಷಯ ಕುರಿತು ನೀಡಿದ್ದ ತೀರ್ಪು ಪುನರ್‌ ಪರಿ­ಶೀಲಿಸುವಂತೆ  ಸುಪ್ರೀಂ­ಕೋರ್ಟ್‌ಗೆ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಮಾಧ್ಯಮ ವಿವಾದದ ಬಗ್ಗೆ ಮಂಗಳವಾರ ಇಲ್ಲಿ ಕಾನೂನು ತಜ್ಞ­ರೊಂದಿಗೆ ಸಮಾಲೋಚನೆ ನಡೆಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಕಲಿಕಾ ಮಾಧ್ಯಮ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಂದಿರುವ ಮಾರ್ಗೋ­ಪಾಯ­ಗಳ ಬಗ್ಗೆ ಚರ್ಚೆ ನಡೆಸಿದ್ದು, ಮೊದಲ ಹಂತದಲ್ಲಿ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಲಾಗುವುದು ಎಂದರು.

ಸುಪ್ರೀಂ ಕೋರ್ಟ್‌ಗೆ ಈಗ ರಜೆ ಇದೆ. ಜೂನ್‌ 6ರವರೆಗೂ ಅರ್ಜಿ ಸಲ್ಲಿಸಲು ಅವಕಾಶ ಇದೆ. ಅಷ್ಟರ ಒಳಗೆ ಅರ್ಜಿ ಸಲ್ಲಿಸಲು ಕ್ರಮಕೈಗೊಳ್ಳ­ಲಾಗು­ವುದು ಎಂದು ವಿವರಿಸಿದರು.

ಪುನರ್ ಪರಿಶೀಲನಾ ಅರ್ಜಿಯಿಂದ ನ್ಯಾಯ ಸಿಗದೆ ಇದ್ದರೆ ಸುಪ್ರೀಂ ಕೋರ್ಟ್‌ ಮುಂದೆ ‘ಪರಿಹಾರಕ ಅರ್ಜಿ’ (ಕ್ಯುರೇಟಿವ್‌ ಪಿಟಿಷನ್‌) ಸಲ್ಲಿಸಲಾಗುವುದು ಎಂದರು.

ಭಾಷಾ ನೀತಿ ವಿಚಾರದಲ್ಲಿ ಬೇರೆ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದು­ಕೊಳ್ಳಲು ಎಲ್ಲ ರಾಜ್ಯಗಳ ಮುಖ್ಯ­ಮಂತ್ರಿ­ಗಳಿಗೆ ಪತ್ರ ಬರೆಯಲಾಗು­ವುದು ಎಂದರು.
ಕೇಂದ್ರಕ್ಕೆ ಪತ್ರ:  ಭಾಷಾ ನೀತಿ ವಿಚಾರ­ದಲ್ಲಿ ಕಾಯ್ದೆ ರಚಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಭಾಷಾ ನೀತಿಯೊಂದನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಡ ಹೇರಲಾಗುವುದು ಎಂದರು.

ಕಾನೂನು ಹೋರಾಟದ ಜೊತೆಗೆ ರಾಜಕೀಯ ಇಚ್ಛಾಶಕ್ತಿ ಮೂಲಕವೂ ಈ ಸಮಸ್ಯೆಗೆ ಪರಿಹಾರ ಕಂಡು­ಕೊಳ್ಳಬಹುದಾಗಿದೆ. ಇಡೀ ದೇಶಕ್ಕೆ ಅನ್ವಯ­ವಾಗುವಂತಹ ಭಾಷಾ ನೀತಿಯನ್ನು ರೂಪಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸ­ಲಾಗು­ವುದು ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ, ಕಾನೂನು ಸಚಿವ ಟಿ.ಬಿ.­ಜಯಚಂದ್ರ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಅಡ್ವೊಕೇಟ್‌ ಜನರಲ್‌ ಪ್ರೊ.ರವಿವರ್ಮ ಕುಮಾರ್ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.