ADVERTISEMENT

150 ಸರ್ಕಾರಿ ವೈದ್ಯಕೀಯ ಸೀಟು ಕೈತಪ್ಪುವ ಆತಂಕ

ಕಿಮ್ಸ್‌ ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರವೇಶಕ್ಕೆ ಎಂಸಿಐ ಅನುಮತಿ ನಿರಾಕರಣೆ

ಸಿದ್ದನಗೌಡ ಪಾಟೀಲ
Published 8 ಜುಲೈ 2018, 20:08 IST
Last Updated 8 ಜುಲೈ 2018, 20:08 IST
ಡಾ.ಶಂಕರ ಮಲಪುರೆ
ಡಾ.ಶಂಕರ ಮಲಪುರೆ   

ಕೊಪ್ಪಳ: ಭಾರತೀಯ ವೈದ್ಯಕೀಯ ಮಂಡಳಿಯ (ಎಂಸಿಐ) ಮಾನದಂಡ ಪಾಲಿಸದಿರುವುದರಿಂದ ಕೊಪ್ಪಳ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ (ಕಿಮ್ಸ್‌) ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ರದ್ದುಗೊಳ್ಳುವ ಭೀತಿಯಿದ್ದು, ಪ್ರಥಮ ವರ್ಷದ 150 ಸರ್ಕಾರಿ ಸೀಟುಗಳು ಕೈತಪ್ಪುವ ಸಾಧ್ಯತೆ ಇದೆ.

ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ, ಬೋಧನಾ ಸಾಮಗ್ರಿ ಹಾಗೂ ವಿಶೇಷ ವೈದ್ಯಕೀಯ ಸೌಲಭ್ಯ ಇಲ್ಲದಿರುವುದನ್ನು ಮನಗಂಡು ಕೇಂದ್ರ ವೈದ್ಯಕೀಯ ಮಂಡಳಿಯು 2018-19ನೇ ಸಾಲಿನ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನಿರಾಕರಿಸಿದೆ.

ಮೂರು ವರ್ಷಗಳ ಹಿಂದೆ ಕಾಲೇಜು ಆರಂಭಗೊಂಡಿದ್ದು,ಮೂಲಸೌಕರ್ಯಗಳ ಕೊರತೆ ಇದೆ. ಶೈಕ್ಷಣಿಕ ಸೌಲಭ್ಯಗಳೂ ಸಹ ಸಮರ್ಪಕವಾಗಿಲ್ಲ.

ADVERTISEMENT

‘ಅನುದಾನದ ಕೊರತೆಯ ನಡುವೆಯೂ ಇತರ ಮೂಲಗಳಿಂದ₹27 ಕೋಟಿ ಆರ್ಥಿಕ ನೆರವು ಪಡೆಯಲಾಗಿದೆ. ಒಟ್ಟು 450 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.ಅವರಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಬಜೆಟ್‌ನಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಸ್ಥಾಪನೆಗೆ ₹ 30 ಕೋಟಿ ಅನುದಾನ ನೀಡಿರುವುದು ಸಂತಸ ತಂದಿದೆ’ ಎಂದು ಕಿಮ್ಸ್ ನಿರ್ದೇಶಕ ಡಾ.ಶಂಕರ ಮಲಪುರೆ ‘ಪ್ರಜಾವಾಣಿ’ಗೆ ತಿಳಿಸಿದರು.

ಎ, ಬಿ, ಸಿ ದರ್ಜೆಯ 197 ಹುದ್ದೆಗಳಿದ್ದು, 122 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 75 ಹುದ್ದೆಗಳು ಖಾಲಿ ಇವೆ. ಹೆಚ್ಚಿನವರು ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದಾರೆ.

ಸುಪ್ರೀಂ ಕೋರ್ಟ್‌ಗೆ ಮೊರೆ
ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಸೂಕ್ತ ಸೌಲಭ್ಯಗಳು ಇಲ್ಲ. ಆದ್ದರಿಂದ ಪ್ರವೇಶ ಅನುಮತಿಯನ್ನು ರದ್ದುಪಡಿಸಬೇಕು ಎಂದು ಭಾರತೀಯ ವೈದ್ಯಕೀಯ ಮಂಡಳಿ ಸದಸ್ಯರು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.

‘ಹಿಂದುಳಿದ ಭಾಗದಲ್ಲಿ ಸ್ಥಾಪನೆಯಾಗಿರುವ ಕಾಲೇಜಿನಿಂದ ಹಲವು ಅನುಕೂಲಗಳಿವೆ. ಏಕಾಏಕಿ ಅನುಮತಿ ರದ್ದು ಪಡಿಸುವುದರಿಂದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ತೊಂದರೆಯಾಗುತ್ತದೆ. ಆದ್ದರಿಂದ ಅನುಮತಿ ನೀಡಬೇಕು’ ಎಂದು ಕಿಮ್ಸ್ ಆಡಳಿತ ಮಂಡಳಿ ಹೈಕೋರ್ಟ್‌ ಮೊರೆ ಹೋಗಿತ್ತು.

‘ಈ ವಿಷಯ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಹೆಚ್ಚಿನ ನಿರ್ದೇಶನ ಹಾಗೂ ಮಾರ್ಗದರ್ಶನಕ್ಕೆ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಬಹುದು’ ಎಂದು ಹೇಳಿ ಹೈಕೋರ್ಟ್ ಅರ್ಜಿ ವಜಾಗೊಳಿಸಿದೆ.

‘ಕಾಲೇಜಿನ ವಾಸ್ತವ ಸ್ಥಿತಿ ತಿಳಿಸಿ, ಅನುಮತಿ ನೀಡುವಂತೆ ಸುಪ್ರೀಂ ಕೋರ್ಟ್‌ ಮೊರೆ ಹೋಗುತ್ತೇವೆ. ಅಲ್ಲಿ ನಮಗೆ ನ್ಯಾಯ ಸಿಗುವ ಭರವಸೆ ಇದೆ’ ಎಂದು ಕಿಮ್ಸ್ ನಿರ್ದೇಶಕ ಡಾ.ಶಂಕರ ಮಲಪುರೆ ತಿಳಿಸಿದರು.

***
ಕಾಲೇಜಿಗೆ ಅವಶ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲು ಖಾಸಗಿ ಸಂಸ್ಥೆ, ಉದ್ಯಮಿಗಳು ಹಾಗೂ ಗಣ್ಯವ್ಯಕ್ತಿಗಳಿಂದ ದಾನದ ರೂಪದಲ್ಲಿ ಹಣ ಪಡೆಯುವ ಯೋಚನೆ ಇದೆ
- ಡಾ.ಶಂಕರ ಮಲಪುರೆ, ನಿರ್ದೇಶಕ, ಕಿಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.