ADVERTISEMENT

16 ರಿಂದ ರಂಭಾಪುರಿ ಶ್ರೀಗಳ ದಸರಾ ದರ್ಬಾರ್

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 19:30 IST
Last Updated 12 ಅಕ್ಟೋಬರ್ 2012, 19:30 IST

ಹುಬ್ಬಳ್ಳಿ: ವೀರಶೈವ ಪಂಚಪೀಠಗಳಲ್ಲಿ ಒಂದಾಗಿರುವ ಬಾಳೆಹೊನ್ನೂರಿನ ರಂಭಾಪುರಿ ಪೀಠದ ವತಿಯಿಂದ ಶರನ್ನವರಾತ್ರಿ ದಸರಾ ಉತ್ಸವ ಮತ್ತು ಧರ್ಮ ಸಮ್ಮೇಳನ (ದಸರಾದರ್ಬಾರ್) ವನ್ನು ಇದೇ 16ರಿಂದ 24ರ ವರೆಗೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಏರ್ಪಡಿಸಲಾಗಿದೆ.

ಸರ್ವ ಜನಾಂಗದ ಶ್ರೇಯೋಭಿವೃದ್ಧಿ, ಸಾಮರಸ್ಯ ಮತ್ತು ವಿಶ್ವಶಾಂತಿಗಾಗಿ ಈ ಬಾರಿಯ ಸಮ್ಮೇಳನ ಅರ್ಪಿತವಾಗಲಿದೆ. ಧರ್ಮ ಸಮ್ಮೇಳನವನ್ನು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಉದ್ಘಾಟಿಸುವರು. ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಚಿವರು, ಶಾಸಕರು, ವಿವಿಧ ಮಠಾಧೀಶರು, ರಾಜಕೀಯ ಪ್ರಮುಖರು ಭಾಗವಹಿಸಲಿದ್ದಾರೆ.

ಸಮ್ಮೇಳನದ ಅಂಗವಾಗಿ ವಿವಿಧ ಧರ್ಮ ಪ್ರವಚನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದೆ ಎಂದು ಶ್ರೀಮಠದ ಪೀಠಾಧಿಕಾರಿ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು `ಪ್ರಜಾವಾಣಿ~ಗೆ ತಿಳಿಸಿದರು.

ಕಾರ್ಯಕ್ರಮದ ಪ್ರಯುಕ್ತ ವಿವಿಧ ಪುಸ್ತಕಗಳು ಮತ್ತು ಪತ್ರಿಕೆಗಳ ಬಿಡುಗಡೆ ಸಮಾರಂಭವನ್ನೂ ಏರ್ಪಡಿಸಿದೆ. ಪ್ರತಿದಿನ ಸಂಜೆ ವಿಶೇಷ ಧರ್ಮ ಸಭೆ ಮತ್ತು ಶ್ರೀಗಳ ಪ್ರವಚನ ನಡೆಯುವುದು.

ಈ ಬಾರಿ ಬಾಳೆಹೊನ್ನೂರು ಧರ್ಮಪೀಠದ ಪ್ರತಿಷ್ಠಿತ ರಂಭಾಪುರಿ ಯುವಸಿರಿ ಪ್ರಶಸ್ತಿಯನ್ನು ಚಿಕ್ಕಮಗಳೂರಿನ ಬಿ.ಎಂ. ಭೋಜೇಗೌಡ ಅವರಿಗೆ, ವೀರಶೈವ ಸಿರಿ ಪ್ರಶಸ್ತಿಯನ್ನು ಬೆಂಗಳೂರಿನ ಡಾ. ಎಸ್. ವಿದ್ಯಾಶಂಕರ ಅವರಿಗೆ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.

ಸಮ್ಮೇಳನದ ಹಿನ್ನೆಲೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ, ಕೃಷಿ ಉಪಯೋಗಿ ಜನಸ್ಪಂದನೆ ಕಾರ್ಯಕ್ರಮ, ಸಾಂಸ್ಕೃತಿಕ ಸಮ್ಮೇಳನ ಆಯೋಜಿಸಿದೆ. ಹಾಸನದ ಗಾನವಿ ವೀರಭದ್ರಪ್ಪ, ಬೆಳಗಾವಿಯ ಅರ್ಪಿತಾ ಹಳಕಟ್ಟಿ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯುವುದು. ಕಡೂರಿನ ಅಂತರರಾಷ್ಟ್ರೀಯ ಯೋಗಪಟು ಕುಸುಮಾ ಅವರು ಯೋಗಾಸನ ಪ್ರದರ್ಶನ ನೀಡುವರು ಎಂದು ಶ್ರೀಗಳು ವಿವರಿಸಿದರು.

ಮೆರವಣಿಗೆ: ಸಮ್ಮೇಳನದ ಮುನ್ನಾ ದಿನವಾದ 15ರಂದು ಸಂಜೆ 121 ಕಾರು, ಐದು ಕುದುರೆಯ ಸಾರೋಟ್‌ನಲ್ಲಿ ಕುಷ್ಟಗಿಯಿಂದ ಗಂಗಾವತಿ ವರೆಗೆ ಬಾಳೆಹೊನ್ನೂರು ಶ್ರೀಗಳ ಮೆರವಣಿಗೆ ನಡೆಯಲಿದೆ ಎಂದು ಉತ್ಸವದ ಸಮಿತಿ ಕಾರ್ಯಾಧ್ಯಕ್ಷ, ಶಾಸಕ ಪರಣ್ಣಮುನವಳ್ಳಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.