ADVERTISEMENT

ಸರ್ಕಾರ ರಚನೆಗೆ 17 ಶಾಸಕರ ತ್ಯಾಗವೂ ಕಾರಣ: ಬಿಜೆಪಿ ಶಾಸಕ ರೇಣುಕಾಚಾರ್ಯ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 10:38 IST
Last Updated 26 ನವೆಂಬರ್ 2020, 10:38 IST
ಬಿಜೆಪಿ ಶಾಸಕ ರೇಣುಕಾಚಾರ್ಯ
ಬಿಜೆಪಿ ಶಾಸಕ ರೇಣುಕಾಚಾರ್ಯ   

ಬೆಂಗಳೂರು: ಸರ್ಕಾರ ರಚನೆಯ ಕುರಿತು ತಮ್ಮ ಹೇಳಿಕೆ ವಿವಾದದ ಸ್ವರೂಪ ಪಡೆಯುವ ಸುಳಿವು ಸಿಗುತ್ತಿದ್ದಂತೆ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ಮಾತಿನ ವರಸೆ ಬದಲಿಸಿದ್ದಾರೆ.

ಗುರುವಾರ ಸುದ್ದಿಗಾರರ ಜತೆ ಮಾತನಾಡಿ, ‘ಸರ್ಕಾರ ರಚನೆಗೆ ವಲಸೆ ಬಂದ 17 ಶಾಸಕರು ಕಾರಣರಲ್ಲ ಎಂದು ಎಲ್ಲೂ ಹೇಳಿಲ್ಲ. ಅವರು ಬಂದಿದ್ದರಿಂದಲೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸರ್ಕಾರ ರಚನೆಯಲ್ಲಿ ಅವರ ತ್ಯಾಗವೂ ಇದೆ. ನಮ್ಮ ಕೊಡುಗೆಯೂ ಇದೆ’ ಎಂದು ಹೇಳಿದ್ದಾರೆ.

‘ಒಬ್ಬ ವ್ಯಕ್ತಿಯಿಂದ ಅಧಿಕಾರ ಬಂದಿಲ್ಲ ಎಂದು ಹೇಳಿದ್ದೇನೆಯೇ ಹೊರತು 17 ಜನರ ವಿಚಾರವನ್ನು ಎಲ್ಲೂ ಪ್ರಸ್ತಾಪಿಸಿಲ್ಲ’ ಎಂದು ಹೇಳಿ ಅವರು ವಿವಾದಕ್ಕೆ ತೆರೆ ಎಳೆದರು.

ADVERTISEMENT

ಹದಿನೇಳು ಶಾಸಕರಿಂದಲೇ ಬಿಜೆಪಿ ಸರ್ಕಾರ ಬಂದಿದೆ ಎಂದು ಹೇಳುವುದು ಸರಿಯಲ್ಲ. 105 ಶಾಸಕರು ಇಲ್ಲದಿದ್ದರೆ ಸರ್ಕಾರ ರಚನೆ ಆಗುತ್ತಿತ್ತೇ? ಮೊದಲು 105 ಶಾಸಕರು ನಂತರ ಉಳಿದವರು ಎಂದು ರೇಣುಕಾಚಾರ್ಯ ಬುಧವಾರ ಹೇಳಿದ್ದರು.

ಯಾರಿಗೂ ಬ್ಲಾಕ್‌ಮೇಲ್‌ ಮಾಡಿಲ್ಲ

ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿಯವರು ತೀರ್ಮಾನ ಮಾಡುತ್ತಾರೆ. ಸಂಪುಟದಲ್ಲಿ ಸ್ಥಾನ ಪಡೆಯಲು ಯಾರಿಗೂ ನಾನು ಬ್ಲಾಕ್‌ಮೇಲ್‌ ಮಾಡಿಲ್ಲ. ನಾನು ಸಾದಾ ಸೀದ ವ್ಯಕ್ತಿ ಹೇಳಬೇಕಾಗಿರುವುದನ್ನು ನೇರವಾಗಿ ಹೇಳುತ್ತೇನೆ. ತಪ್ಪು ಮಾಡಿದ್ದರೆ ಆತ್ಮಾವಲೋಕನ ಮಾಡಿಕೊಳ್ಳುತ್ತೇನೆ. ಸಂಪುಟ ವಿಸ್ತರಣೆ ವಿಚಾರದಲ್ಲಿ ನನಗಿಂತ ನಿಮಗೇ ಆತುರ ಹೆಚ್ಚಾಗಿದೆ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬದಲಾವಣೆ ಇಲ್ಲ ಎಂದು ಪಕ್ಷದ ವರಿಷ್ಠರು ಹೇಳಿದ್ದಾರೆ. ಯಡಿಯೂರಪ್ಪ ಬದಲಾವಣೆ ಆಗುತ್ತಾರೆ ಎಂದು ಸಿದ್ದರಾಮಯ್ಯ ಅವರಿಗೆ ಕನಸು ಬಿತ್ತೆ? ಅವರದು ಹಗಲುಗನಸೋ, ಇರುಳುಗನಸೋ ಎಂಬುದನ್ನು ಹೇಳಲಿ. ಇದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಂಡರೆ ಸಾಕು. ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಅವರ ಪಕ್ಷದಲ್ಲಿ ಒಳ ಜಗಳವಿತ್ತು. ಆದ್ದರಿಂದ, ಕಾಂಗ್ರೆಸ್ ಚುನಾವಣೆಯಲ್ಲಿ ನೆಲಕಚ್ಚಿತು. ಅವರ ತಟ್ಟೆಯಲ್ಲಿ ಏನು ಬಿದ್ದಿದೆ ಎನ್ನುವುದನ್ನು ಮೊದಲು ನೋಡಿಕೊಳ್ಳಲಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.