ಬೆಂಗಳೂರು: ನಕಲಿ ಅಂಕಪಟ್ಟಿ ಸಲ್ಲಿಸಿ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಿಗೆ ಆಯ್ಕೆಯಾಗಿದ್ದ 23 ಸಹಾಯಕ ಪ್ರಾಧ್ಯಾಪಕರ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಆರೋಪಿಗಳಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಇವರ ವಿರುದ್ಧ ಕಾಲೇಜು ಶಿಕ್ಷಣ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ಆರ್.ಕೆ.ರಮೇಶ್ ಬಾಬು ಅವರು ನ.10ರಂದು ದೂರು ಕೊಟ್ಟಿದ್ದರು. ವಂಚನೆ (ಐಪಿಸಿ 420), ನಕಲಿ ದಾಖಲೆಗಳ ಸೃಷ್ಟಿ (465), ಅಧಿಕಾರಿಗಳ ಸಹಿಯನ್ನು ನಕಲು ಮಾಡಿದ (468) ಆರೋಪಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ದೂರಿನ ವಿವರ: ‘ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ 2,034 ಅಭ್ಯರ್ಥಿಗಳನ್ನು ಈ ವರ್ಷದ ಫೆ.4ರಂದು ಆಯ್ಕೆ ಮಾಡಲಾಗಿತ್ತು. ಈ ಅಭ್ಯರ್ಥಿಗಳ ದಾಖಲಾತಿಗಳನ್ನು ಪರಿಶೀಲಿಸಲು ಕಾಲೇಜು ಶಿಕ್ಷಣ ಆಯುಕ್ತರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಯಿತು.
ದಾಖಲಾತಿ ಪರಿಶೀಲನೆ ವೇಳೆ 23 ಅಭ್ಯರ್ಥಿಗಳು ಪಿಎಚ್.ಡಿ ಹಾಗೂ ಎಂ.ಫಿಲ್ನ ನಕಲಿ ಅಂಕಪಟ್ಟಿ ಸಲ್ಲಿಸಿ ಆಯ್ಕೆಯಾಗಿರುವುದು ಗೊತ್ತಾಯಿತು. ಹುದ್ದೆ ಗಿಟ್ಟಿಸಿಕೊಳ್ಳಲು ವಂಚಿಸಿದ ಈ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ರಮೇಶ್ ಬಾಬು ಅವರು ದೂರಿನಲ್ಲಿ ಕೋರಿದ್ದಾರೆ.
10 ಹೆಸರು:
ಕೊಪ್ಪಳದ ಶಿವಬಸಪ್ಪ, ಹರನಗೌಡ, ಪಂಚಾಕ್ಷರಯ್ಯ (ಥಾಮಸ್ ಕಾಲೇಜು), ಬಳ್ಳಾರಿಯ ಎ.ವಿರೂಪಾಕ್ಷ, ಬೆಳಗಾವಿಯ ಎಸ್ತಾರ್ ಸಾರಿನಾ, ರಾಯಚೂರಿನ ಚೇತನ್ ಪಾಟೀಲ್, ಗುರುರಾಜ್ ಸಿದ್ಧರಾಮ ಗೊಡಗೇರಿ, ಬಾಗಲಕೋಟೆಯ ಫಿರೋಜ್ ಅಹಮದ್ ಭಗವಾನ್, ಬೀದರ್ನ ಬಿ.ಮಹಾದೇವಿ, ಕಲಬುರ್ಗಿಯ ಮಿಥುನ್ ಹಾಗೂ ಇತರೆ 13 ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.