ಮೈಸೂರು: ಎಸ್.ಜಾನಕಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಅ.28ರಂದು ಸಂಜೆ 6 ಗಂಟೆಗೆ ಇಲ್ಲಿನ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಗಾಯಕಿ ಎಸ್.ಜಾನಕಿ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.
ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಟ್ರಸ್ಟ್ ಅಧ್ಯಕ್ಷ ನವೀನ್, ‘ಇದು ಎಸ್.ಜಾನಕಿ ಅವರು ನೀಡುತ್ತಿರುವ ಕೊನೆಯ ಕಾರ್ಯಕ್ರಮ. ಆರು ತಿಂಗಳ ಹಿಂದೆಯೇ ಅವರು ಸಾರ್ವಜನಿಕ ಕಾರ್ಯಕ್ರಮ ನೀಡುವುದಿಲ್ಲ ಎಂದು ಹೇಳಿದ್ದರು. ಸತತವಾಗಿ ಅವರಲ್ಲಿ ಮನವಿ ಮಾಡಿದ ಫಲವಾಗಿ ಕಾರ್ಯಕ್ರಮ ನೀಡಲು ಒಪ್ಪಿದ್ದು, ಇನ್ನು ಮುಂದೆ ಕಾರ್ಯಕ್ರಮ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಚಲನಚಿತ್ರರಂಗದ ಗಣ್ಯರಾದ ಶಿವರಾಜ್ಕುಮಾರ್, ಬಿ.ಸರೋಜಾದೇವಿ, ಶೈಲಶ್ರೀ, ಸಾಹುಕಾರ್ ಜಾನಕಿ, ಭಾರತಿ ವಿಷ್ಣುವರ್ಧನ್, ಹಂಸಲೇಖ, ಶ್ರೀನಾಥ್, ರಾಜೇಶ್, ಜಯಂತಿ ಭಾಗಿಯಾಗಲಿದ್ದಾರೆ’ ಎಂದು ತಿಳಿಸಿದರು.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಎಸ್.ಜಾನಕಿ ಅವರ ಪುತ್ರ ಮುರಳಿಕೃಷ್ಣ, ‘ಈಗಾಗಲೇ ಅಮ್ಮ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹಾಡುವುದಕ್ಕೆ ನಿವೃತ್ತಿ ಘೋಷಿಸಿರುವುದು ನಿಜ. ನಿವೃತ್ತಿ ಘೋಷಣೆಗೂ ಮುಂಚೆಯೇ ಒಪ್ಪಿದ್ದ ಅಥವಾ ಮಾತು ಕೊಟ್ಟಿದ್ದ ಕಾರ್ಯಕ್ರಮಗಳನ್ನಷ್ಟೇ ಈಗ ನೀಡುತ್ತಿದ್ದಾರೆ. ಹೊಸ ಕಾರ್ಯಕ್ರಮಗಳನ್ನು ಅವರು ಒಪ್ಪುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.