ಚಿತ್ರದುರ್ಗ: ಹೈದರಾಬಾದ್ ಕರ್ನಾಟಕದ ಆರು ಜಿಲ್ಲೆಗಳ ಅಭಿವೃದ್ಧಿಗೆ ಸಂವಿಧಾನದ 371 (ಜೆ) ಕಾಲಂ ಅಡಿಯಲ್ಲಿ ಕಲ್ಪಿಸಿದ ವಿಶೇಷ ಸ್ಥಾನವನ್ನು ಚಿತ್ರದುರ್ಗ ಜಿಲ್ಲೆಗೂ ವಿಸ್ತರಿಸುವಂತೆ ಸಂಸದ ಬಿ.ಎನ್. ಚಂದ್ರಪ್ಪ ಕೇಂದ್ರ ಸರ್ಕಾರದ ಗಮನ ಸೆಳೆದರು.
ಲೋಕಸಭೆಯ ಅಧಿವೇಶನದಲ್ಲಿ ಸೋಮವಾರ ಈ ವಿಷಯ ಪ್ರಸ್ತಾಪಿಸಿದ ಅವರು, ‘ರಾಜ್ಯದಲ್ಲಿ ಅತಿ ಹಿಂದುಳಿದ ಕಲಬುರ್ಗಿ, ರಾಯಚೂರು, ಯಾದಗಿರಿ, ಬೀದರ್, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳಿಗೆ ಸಂವಿಧಾನದ 371 (ಜೆ) ವಿಶೇಷ ಸ್ಥಾನ ಕಲ್ಪಿಸಲಾಗಿದೆ. ತೀರ ಹಿಂದುಳಿದ ಜಿಲ್ಲೆಯಾಗಿರುವ ಚಿತ್ರದುರ್ಗ, ಅಭಿವೃದ್ಧಿ ಹೊಂದಲು ಸಂವಿಧಾನಬದ್ಧವಾಗಿ ವಿಶೇಷ ಸ್ಥಾನ ನೀಡುವ ಅಗತ್ಯವಿದೆ’ ಎಂದು ಹೇಳಿದರು.
‘ಕರ್ನಾಟಕ ಸೇರಿ ದೇಶದ ಆರು ರಾಜ್ಯಗಳು ನಿರಂತರವಾಗಿ ಬರಕ್ಕೆ ತುತ್ತಾಗುತ್ತಿವೆ. ಚಿತ್ರದುರ್ಗದಲ್ಲಿ ಸರಾಸರಿಗಿಂತ ಶೇ 19ರಷ್ಟು ಕಡಿಮೆ ಮಳೆ ಸುರಿದಿದೆ. ಜನ ಮತ್ತು ಜಾನುವಾರಿಗೆ ನೀರಿನ ಅಭಾವ ಸೃಷ್ಟಿಯಾಗಿದೆ. ಮಣ್ಣಿನಲ್ಲಿ ತೇವಾಂಶದ ಕೊರತೆ ಉಂಟಾಗಿದೆ. ಕೇಂದ್ರ ಕೃಷಿ ಇಲಾಖೆ ನಿಗದಿಪಡಿಸಿದ ಮಾನದಂಡದ ಆಧಾರದ ಮೇರೆಗೆ ಬರ ಪರಿಸ್ಥಿತಿ ಸ್ಪಷ್ಟವಾಗಿ ಗೋಚರಿಸುತ್ತಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.