ADVERTISEMENT

‘₹ 438.14 ಕೋಟಿ ಬೆಳೆ ವಿಮೆ ನಷ್ಟ ಪರಿಹಾರ ವಿತರಣೆ’

​ಪ್ರಜಾವಾಣಿ ವಾರ್ತೆ
Published 10 ಜೂನ್ 2017, 19:30 IST
Last Updated 10 ಜೂನ್ 2017, 19:30 IST
‘₹ 438.14 ಕೋಟಿ ಬೆಳೆ ವಿಮೆ ನಷ್ಟ ಪರಿಹಾರ ವಿತರಣೆ’
‘₹ 438.14 ಕೋಟಿ ಬೆಳೆ ವಿಮೆ ನಷ್ಟ ಪರಿಹಾರ ವಿತರಣೆ’   

ಬೆಂಗಳೂರು: ‘2016-17ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ರಾಜ್ಯದಲ್ಲಿ ಈವರೆಗೆ 2,98,551 ಫಲಾನುಭವಿಗಳಿಗೆ ₹ 438.14 ಕೋಟಿ ಬೆಳೆ ವಿಮೆ ನಷ್ಟ ಪರಿಹಾರ ನೀಡಲಾಗಿದೆ’ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಜೆಡಿಎಸ್‌ನ ತಿಮ್ಮರಾಯಪ್ಪ ಅವರ ಪ್ರಶ್ನೆಗೆ ವಿಧಾನಸಭೆಯಲ್ಲಿ ಶುಕ್ರವಾರ ಉತ್ತರಿಸಿದ ಸಚಿವರು, ‘ಇದೇ ಮೊದಲ ಬಾರಿಗೆ ಬೆಳೆ ನಷ್ಟ ಪರಿಹಾರವನ್ನು ರೈತರ ಉಳಿತಾಯ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ’ ಎಂದರು.

‘ಒಟ್ಟು 6,17,010 ಫಲಾನುಭವಿಗಳಿಗೆ ₹ 967.47 ಕೋಟಿ ನಷ್ಟ ಪರಿಹಾರ ಲೆಕ್ಕ ಹಾಕಲಾಗಿದೆ. ಉಳಿದ ಹಣವನ್ನು ಜಮೆ ಮಾಡಲಾಗುತ್ತಿದೆ’ ಎಂದೂ ಸಚಿವರು ತಿಳಿಸಿದರು.

ADVERTISEMENT

ಕಾಂಗ್ರೆಸ್‌ನ ಶಿವಾನಂದ ಪಾಟೀಲ ಕೇಳಿದ ಪ್ರಶ್ನೆಗೆ ಉತ್ತರಿಸಿದ ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ, ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 218 ರ ಭಾಗವಾಗಿರುವ ವಿಜಯಪುರ- ಕೊಲ್ಹಾರ ರಸ್ತೆ ಅಭಿವೃದ್ಧಿಪಡಿಸಲು ಮಂಜೂರಾತಿ ನೀಡಿದ್ದು, ₹ 291.49 ಕೋಟಿ ಈ ಕಾಮಗಾರಿಗೆ ಪ್ರಸಕ್ತ ಸಾಲಿನಲ್ಲಿ ₹ 168.47 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಕಾಮಗಾರಿಯ ಟೆಂಡರ್ ಕರೆಯಲಾಗಿದೆ’ ಎಂದು ಅವರು ತಿಳಿಸಿದರು.

ಬಿಜೆಪಿ ಬೋಪಯ್ಯ ಕೆ.ಜಿ. ಅವರ ಪ್ರಶ್ನೆಗೆ ಉತ್ತರಿಸಿದ ಪೌರಾಡಳಿತ ಸಚಿವ ಈಶ್ವರ ಖಂಡ್ರೆ, ‘ನಗರೋತ್ಥಾನ ಯೋಜನೆಯಡಿ (3ನೇ ಹಂತದ) ರಾಜ್ಯದ ಎಲ್ಲಾ 264 ನಗರ ಸ್ಥಳೀಯ ಸಂಸ್ಥೆಗಳಿಗೆ ₹ 2,847 ಕೋಟಿ ಅನುದಾನ ನಿಗದಿಪಡಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.