ಶ್ರೀರಂಗಪಟ್ಟಣ: ತನ್ನ ಎರಡು ವರ್ಷದ ಹೆಣ್ಣು ಮಗುವನ್ನು ತಂದೆಯೇ ₹ 500ಕ್ಕೆ ಮಾರಾಟ ಮಾಡಲು ಯತ್ನಿಸಿದ ಪ್ರಸಂಗ ಪಟ್ಟಣದಲ್ಲಿ ಮಂಗಳವಾರ ನಡೆದಿದೆ.
ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆ ಬಳಿಯ ನಿವಾಸಿ ರಾಜಪ್ಪ ಎಂಬುವವರ ಮಗ ವಿನೋದ್ (32) ಮಗಳನ್ನು ಮಾರಾಟ ಮಾಡಲು ಯತ್ನಿಸುತ್ತಿರುವುದನ್ನು ಕಂಡ ಸ್ಥಳೀಯರು ನೀಡಿದ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ.
ಮಗುವನ್ನು, ಮಕ್ಕಳ ಸಹಾಯವಾಣಿ ಸದಸ್ಯರಾದ ನಂದಿನಿ, ನಂದೀಶ್ಗೌಡ ಅವರ ಸುಪರ್ದಿಗೆ ನೀಡಲಾಗಿದೆ. ಮಗುವನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಗುವುದು ಎಂದು ಅವರು ತಿಳಿಸಿದರು.
‘ನಾಲ್ಕು ದಿನಗಳ ಹಿಂದೆ ಪತ್ನಿ ರಾಮವ್ವ, ಪುತ್ರ, ಪುತ್ರಿ ಹಾಗೂ ಸ್ನೇಹಿತ ರಾಮು ಜತೆ ಇಲ್ಲಿಗೆ ಬಂದಿದ್ದೆವು. ರಾಮವ್ವ ಸೋಮವಾರ ಮಗನನ್ನು ಕರೆದುಕೊಂಡು ರಾಮು ಜತೆ ಹೋಗಿದ್ದಾಳೆ. ಪುತ್ರಿಯನ್ನು ಸಾಕಲಾಗದೆ ಯಾರಿಗಾದರೂ ಕೊಟ್ಟು ಬೆಂಗಳೂರಿಗೆ ಮರಳಲು ಯತ್ನಿಸಿದ್ದಾಗಿ ವಿನೋದ್ ತಿಳಿಸಿದ್ದಾನೆ’ ಎಂದು ಸಬ್ಇನ್ಸ್ಪೆಕ್ಟರ್ ಯೋಗಾಂಜನಪ್ಪ ತಿಳಿಸಿದರು.
‘ವಿನೋದ್ಗೆ ಮೂವರು ಪತ್ನಿಯರಿದ್ದು, ಇಬ್ಬರು ಪತ್ನಿಯರು ಆತನಿಂದ ದೂರವಾಗಿದ್ದಾರೆ. ಕಿರಿಯ ಪತ್ನಿ ರಾಮವ್ವನಿಗೆ ಇಬ್ಬರು ಮಕ್ಕಳಿದ್ದು, ಆಕೆ ಕೂಡ ಸೋಮವಾರ ಗಂಡನನ್ನು ಬಿಟ್ಟು ಹೋಗಿದ್ದಾಳೆ. ಹೆಣ್ಣು ಮಗು ನನಗೆ ಬೇಡ, ಯಾರಾದರೂ ಸಾಕಿಕೊಳ್ಳಲಿ ಎಂದು ವಿನೋದ್ ಹೇಳುತ್ತಿದ್ದಾನೆ. ಹಾಗಾಗಿ, ಮಗುವನ್ನು ದತ್ತು ಸ್ವೀಕಾರ ಕೇಂದ್ರಕ್ಕೆ ಕೊಡಲು ಉದ್ದೇಶಿಸಲಾಗಿದೆ’ ಎಂದು ನಂದಿನಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.