ಕುಣಿಗಲ್: ಹೊಸ ವರ್ಷದ ಕಾರಣ ಹೊಸ ಕಾರು ಖರೀದಿಸಿ ಕೊರಟಗೆರೆ ತಾಲ್ಲೂಕಿನ ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯಕ್ಕೆ ತೆರಳುತ್ತಿದ್ದ ಒಂದೇ ಕುಟುಂಬದ ಐದು ಮಂದಿ ತಾಲ್ಲೂಕಿನ ಗವಿಮಠದ ಬಳಿ ಸೋಮವಾರ ನಸುಕಿನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ತಾಲ್ಲೂಕಿನ ಚೌಡನಕುಪ್ಪೆಯ ಸಿದ್ದೋಜಿರಾವ್ (55), ಅವರ ಸೊಸೆ ಉಷಾಬಾಯಿ (25), ಮೊಮ್ಮಕ್ಕಳಾದ ಕೀರ್ತನಾ (7), ಹಿತೇಶ್ (2) ಮತ್ತು ಭುವನ್ (17) ಮೃತರು. ಸಿದ್ದೋಜಿರಾವ್ ಅವರ ಪುತ್ರರಾದ ಹರೀಶ್ ರಾವ್ ಮತ್ತು ಸತೀಶ್ ರಾವ್ ಮಂಡ್ಯದಲ್ಲಿ ವಾಸಿಸುತ್ತಿದ್ದಾರೆ. ಗ್ರಾಮಕ್ಕೆ ಬಂದು ತಂದೆ–ತಾಯಿಯನ್ನು ಕರೆದುಕೊಂಡು ದೇವಾಲಯಕ್ಕೆ ಹೊರಟಿದ್ದರು.
ಮಠದ ಬಳಿ ಕಾರಿಗೆ ಅರುಣ್ ಕುಮಾರ್ ಎಂಬ ಬಾಲಕ ಅಡ್ಡ ಬಂದಿದ್ದಾನೆ. ಆತನನ್ನು ರಕ್ಷಿಸಲು ಚಾಲಕ ಮುಂದಾದಾಗ ರಸ್ತೆ ಬದಿ ನಿಂತಿದ್ದ ಕ್ಯಾಂಟರ್ಗೆ ಕಾರು ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದೆ. ಉಷಾಬಾಯಿ ಮತ್ತು ಹಿತೇಶ್ ರುಂಡ– ಮುಂಡಗಳು ಬೇರ್ಪಟ್ಟು ರಸ್ತೆಗೆ ಬಿದ್ದಿದ್ದವು.
ಗಾಯಾಳು ಅಶ್ವಿನಿ ಬಾಯಿ, ಸತೀಶ್ ರಾವ್, ನವೀನ್ ರಾವ್, ಹರೀಶ್ ರಾವ್, ಅನಸೂಯಬಾಯಿ ಅವರನ್ನು ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅರುಣ್ಗೂ ಗಾಯಗಳಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.