ADVERTISEMENT

ಚಿಕ್ಕಲ್ಲೂರು ಜಾತ್ರೆ: ಚಂದ್ರಮಂಡಲ ಉತ್ಸವಕ್ಕೆ ಅದ್ದೂರಿ ಚಾಲನೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2018, 19:30 IST
Last Updated 2 ಜನವರಿ 2018, 19:30 IST
ಜಾತ್ರೆಯ ಅಂಗವಾಗಿ ದೇವಸ್ಥಾನವನ್ನು ಸುಣ್ಣ, ಬಣ್ಣದಿಂದ ಅಲಂಕರಿಸಲಾಗಿದೆ.
ಜಾತ್ರೆಯ ಅಂಗವಾಗಿ ದೇವಸ್ಥಾನವನ್ನು ಸುಣ್ಣ, ಬಣ್ಣದಿಂದ ಅಲಂಕರಿಸಲಾಗಿದೆ.   

ಚಾಮರಾಜನಗರ: ಜಿಲ್ಲೆಯ ಸುಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆಯ ಆರಂಭದ ದಿನವಾದ ಮಂಗಳವಾರ ರಾತ್ರಿ ಜರುಗಿದ ಚಂದ್ರಮಂಡಲ ಉತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.

ಚಂದ್ರಮಂಡಲಕ್ಕೆ ಅಗ್ನಿಸ್ಪರ್ಶ ಮಾಡುತ್ತಿದ್ದಂತೆ ‘ಧರೆಗೆ ದೊಡ್ಡವರಾದ ಮಂಟೇಸ್ವಾಮಿ ಅವರ ಪಾದಕ್ಕೆ ಉಘೇ, ಕತ್ತಲ ರಾಜ್ಯದಲ್ಲಿ ಪರಂಜ್ಯೋತಿಯಾಗಿ ಬೆಳಗಿದ ಸಿದ್ದಪ್ಪಾಜಿಯವರ ಚಂದ್ರಮಂಡಲಕ್ಕೆ ಉಘೇ’ ಎಂಬ ಭಕ್ತರ ಉದ್ಘೋಷ ಜಾತ್ರೆಯಾದ್ಯಂತ ಮಾರ್ದನಿಸಿತು. ದೇವಸ್ಥಾನದ ಸುತ್ತಲೂ ನೆರೆದಿದ್ದ ಭಕ್ತರು ಚಂದ್ರಮಂಡಲದ ಬೆಳಗನ್ನು ಕಣ್ತುಂಬಿಕೊಂಡರು.

ಹೂವು, ಹೊಂಬಾಳೆ, ಬಾಳೆಕಂದು, ಮಾವಿನ ತೋರಣಗಳಿಂದ ಚಂದ್ರಮಂಡಲ ಕಟ್ಟೆಯನ್ನು ಸಿಂಗರಿಸಲಾಗಿತ್ತು. ಬೊಪ್ಪೆಗೌಡನಪುರದ ಧರೆಗೆ ದೊಡ್ಡವರ ಸಂಸ್ಥಾನ ಮಠದ ಪೀಠಾಧಿಪತಿ ಜ್ಞಾನಾನಂದ ಚೆನ್ನರಾಜೇ ಅರಸು ಅವರು ಮಂಗಳಾರತಿ ಬೆಳಗಿಸಿ ಚಂದ್ರಮಂಡಲಕ್ಕೆ ಅಗ್ನಿ ಸ್ಪರ್ಶ ಮಾಡಿದರು.

ADVERTISEMENT

ಭಕ್ತರು ಚಂದ್ರಮಂಡಲ ಜ್ಯೋತಿಗೆ ದವಸಧಾನ್ಯ, ಹಣ್ಣು, ಜವನ, ನಗನಾಣ್ಯಗಳನ್ನು ಎಸೆಯುವುದರ ಮೂಲಕ ತಮ್ಮ ಹರಕೆ ಸಲ್ಲಿಸಿದರು. ಬೆಂಗಳೂರು, ಮೈಸೂರು, ಕನಕಪುರ, ರಾಮನಗರ, ಗುಂಡ್ಲುಪೇಟೆ, ಚಾಮರಾಜನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಜನಸಾಗರ ಹರಿದು ಬಂದಿತ್ತು. ನೆರೆದಿದ್ದ ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಬೂದಿಗಾಗಿ ಮುಗಿಬಿದ್ದ ಭಕ್ತರು: ಚಂದ್ರಮಂಡಲ ಹತ್ತಿ ಉರಿದು ಕೆಳಗೆ ಬೀಳುತ್ತಿದ್ದಂತೆ ಭಕ್ತರು ಬೂದಿಯನ್ನು ತೆಗೆದುಕೊಳ್ಳಲು ಮುಗಿಬಿದ್ದರು.
ನೀಲಗಾರರ ಪರಂಪರೆಯಲ್ಲಿ ಅತ್ಯಂತ ಶ್ರೇಷ್ಠ ಎಂದು ನಂಬಿರುವ ಬೂದಿಯನ್ನು ‘ಕಪ್ಪುದೂಳ್ತ’ ಎಂದು ಕರೆಯಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.