ಬೆಂಗಳೂರು: ವಿದ್ಯುನ್ಮಾನ ಮತಯಂತ್ರಗಳು ದುರ್ಬಳಕೆಯಾಗುತ್ತಿವೆ ಎಂಬ ಶಂಕೆ ವ್ಯಕ್ತವಾಗಿದ್ದು, ಅವುಗಳ ಪರಿಶೀಲನೆಗೆ ‘ಹ್ಯಾಕಥಾನ್’ಗೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಬೇಕು. ಅದಕ್ಕಾಗಿ 250ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳನ್ನು ನೀಡಿ ಅವುಗಳ ಪರಿಶೀಲನೆಗೆ ಅನುವು ಮಾಡಬೇಕೆಂದು ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಮಂಗಳವಾರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.
ರಾಜ್ಯದಲ್ಲಿ ಹ್ಯಾಕಥಾನ್ ನಡೆಸಲು ಅನುಮತಿ ಕೋರಿ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಚುನಾವಣಾ ಆಯುಕ್ತ ಅಂಚಲ್ ಕುಮಾರ್ ಜ್ಯೋತಿ ಅವರಿಗೆ ಪತ್ರ ಬರೆದಿದ್ದಾರೆ.
ಇವಿಎಂಗಳನ್ನು ಪರಿಶೀಸಲಿಸುವುದಕ್ಕಾಗಿರುವ ದಾಖಲೆ ಪತ್ರಗಳು, ಪರೀಕ್ಷೆಯ ವಿಧಾನ ಮತ್ತು ಫಲಿತಾಂಶ, ಸುರಕ್ಷಾ ವಿಧಾನಗಳ ಬಗ್ಗೆಯೂ ಮಾಹಿತಿ ನೀಡುವಂತೆ ಖರ್ಗೆ ತಮ್ಮ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಇವಿಎಂ ಹ್ಯಾಕಥಾನ್ ಆಯೋಜಿಸಲು ಕರ್ನಾಟಕ ಸರ್ಕಾರ ಮತ್ತು ಚುನಾವಣಾ ಆಯೋಗ ಜಂಟಿಯಾಗಿ ನಿರ್ಧರಿಸಿದ್ದು, ಇದಕ್ಕಾಗಿ ತಂತ್ರಪ್ರವೀಣರನ್ನು, ವಿಜ್ಞಾನಿಗಳು, ಕಾರ್ಪೊರೇಟ್, ಆರ್ ಆ್ಯಂಡ್ ಡಿ ಇನ್ಸಿಟ್ಯೂಟ್, ಸ್ಟಾರ್ಟ್ ಅಪ್ ಮತ್ತು ಪರಿಣಿತರು ಸೇರಿದಂತೆ ರಾಜಕಾರಣಿಗಳು ಈ ಹ್ಯಾಕಥಾನ್ನಲ್ಲಿ ಭಾಗವಹಿಸಬೇಕೆಂದು ಆಹ್ವಾನಿಸುತ್ತೇವೆ ಎಂದು ಖರ್ಗೆ ಪತ್ರದಲ್ಲಿ ಬರೆದಿದ್ದಾರೆ.
ಚುನಾವಣಾ ಆಯೋಗ ನಡೆಸುವ ಹ್ಯಾಕಥಾನ್ ನಲ್ಲಿ ರಾಜಕೀಯ ಪಕ್ಷಗಳು ಮಾತ್ರ ಭಾಗವಹಿಸಬಹುದು ಆದರೆ ಕರ್ನಾಟಕದಲ್ಲಿ ನಡೆಯಲಿರುವ ಹ್ಯಾಕಥಾನ್ನಲ್ಲಿ ಸಾರ್ವಜನಿಕರು ಭಾಗವಹಿಸಬಹುದಾಗಿದೆ. ಸಾರ್ವಜನಿಕರಿಗೆ ಹ್ಯಾಕಥಾನ್ನಲ್ಲಿ ಭಾಗವಹಿಸುವ ಅವಕಾಶ ನೀಡಿರುವ ಬಗ್ಗೆ ಸಮರ್ಥಿಸಿಕೊಂಡ ಖರ್ಗೆ, ರಾಜಕೀಯ ಪಕ್ಷಗಳ ಜತೆಗೆ ಇಲ್ಲಿನ ಯುವ ಪ್ರತಿಭೆಗಳಿಗೂ ಅವಕಾಶ ನೀಡಬೇಕು. ಇದೊಂದು ಕೇವಲ ರಾಜಕೀಯ ಉದ್ದೇಶದಿಂದ ಕೂಡಿದ ಹ್ಯಾಕಥಾನ್ ಅಲ್ಲ ಎಂದಿದ್ದಾರೆ.
ಹಲವಾರು ವ್ಯಕ್ತಿಗಳು ಅಥವಾ ಕಾರ್ಪೊರೇಟ್ಗಳು ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಳ್ಳಲು ಇಷ್ಟಪಡುವುದಿಲ್ಲ. ಹಾಗಾಗಿ ರಾಜಕೀಯ ಪಕ್ಷಗಳಿಗೆ ಮಾತ್ರವಲ್ಲ ಸಾರ್ವಜನಿಕರಿಗೂ ಹ್ಯಾಕಥಾನ್ನಲ್ಲಿ ಭಾಗವಹಿಸುವ ಅವಕಾಶ ನೀಡಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.