ADVERTISEMENT

ಬಶೀರ್‌ ಕೊಲೆಯತ್ನ: ಬಂಧಿತ ಆರೋಪಿಗಳು ಬಜರಂಗದಳದ ಕಾರ್ಯಕರ್ತರು

ದೀಪಕ್‌ ರಾವ್‌ ಕೊಲೆಗೆ ಪ್ರತೀಕಾರ ಎಂದಿರುವ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 13:42 IST
Last Updated 6 ಜನವರಿ 2018, 13:42 IST
ಬಶೀರ್‌ ಕೊಲೆಯತ್ನ: ಬಂಧಿತ ಆರೋಪಿಗಳು ಬಜರಂಗದಳದ ಕಾರ್ಯಕರ್ತರು
ಬಶೀರ್‌ ಕೊಲೆಯತ್ನ: ಬಂಧಿತ ಆರೋಪಿಗಳು ಬಜರಂಗದಳದ ಕಾರ್ಯಕರ್ತರು   

ಮಂಗಳೂರು: ನಗರದ ಕಾಟಿಪಳ್ಳದಲ್ಲಿ ಬುಧವಾರ ನಡೆದ ದೀಪಕ್‌ ರಾವ್‌ ಕೊಲೆಗೆ ಪ್ರತೀಕಾರವಾಗಿ ಕೊಟ್ಟಾರ ಚೌಕಿಯಲ್ಲಿ ಅದೇ ದಿನ ರಾತ್ರಿ ಅಹಮ್ಮದ್ ಬಶೀರ್‌ ಎಂಬವರನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಲು ಯತ್ನಿಸಿದ್ದ ನಾಲ್ವರು ಆರೋಪಿಗಳನ್ನು ನಗರ ಅಪರಾಧ ಘಟಕದ (ಸಿಸಿಬಿ) ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್‌ ಟಿ.ಆರ್‌.ಸುರೇಶ್‌, ‘ಬಶೀರ್‌ ಕೊಲೆಯತ್ನ ಪ್ರಕರಣದಲ್ಲಿ ಕಾಸರಗೋಡು ಜಿಲ್ಲೆ ಉಪ್ಪಳ ಸಮೀಪದ ಅಂಬಾರ್‌ನ ಕೃಷ್ಣನಗರ ನಿವಾಸಿ ಶ್ರೀಜಿತ್‌ ಪಿ.ಕೆ. ಅಲಿಯಾಸ್‌ ಶ್ರೀಜು (25), ಮಂಗಳೂರಿನ ಪಡೀಲ್‌ನ ಅಳಪೆ ಕಂಡೇವು ಮನೆ ನಿವಾಸಿಗಳಾದ ಕಿಶನ್‌ (21), ಧನುಷ್‌ ಪೂಜಾರಿ (22) ಮತ್ತು ಕಾಸರಗೋಡು ಜಿಲ್ಲೆ ಮಂಜೇಶ್ವರದ ಕುಂಜತ್ತೂರು ಜೋಗಿಗುಡ್ಡೆ ನಿವಾಸಿ ಸಂದೇಶ್ ಕೋಟ್ಯಾನ್‌ (22) ಎಂಬವರನ್ನು ಬಂಧಿಸಲಾಗಿದೆ’ ಎಂದರು.

ಜಾತ್ರೆಯಿಂದ ಬಂದು ಹಲ್ಲೆ
ಆರೋಪಿಗಳೆಲ್ಲರೂ ಕಂಕನಾಡಿ ಗರಡಿ ಜಾತ್ರೆಯಲ್ಲಿ ಒಟ್ಟು ಸೇರಿದ್ದರು. ದೀಪಕ್‌ ಕೊಲೆ ವಿಚಾರ ತಿಳಿದ ಬಳಿಕ ಪ್ರತೀಕಾರ ತೆಗೆದುಕೊಳ್ಳಲು ನಿರ್ಧರಿಸಿದ್ದರು. ಅಲ್ಲಿಂದ ಕಿಶನ್‌ ಮತ್ತು ಧನುಷ್‌ ಮನೆಗೆ ಹೋಗಿ ಮಾರಕಾಸ್ತ್ರಗಳನ್ನು ತೆಗೆದುಕೊಂಡು ನಗರಕ್ಕೆ ಬಂದಿದ್ದರು. ಕೊಟ್ಟಾರದ ಬಳಿ ಸಿಕ್ಕ ಬಶೀರ್‌ ಮೇಲೆ ದಾಳಿಮಾಡಿ ಕೊಲೆಗೆ ಯತ್ನಿಸಿದ್ದರು ಎಂಬುದು ವಿಚಾರಣೆಯಿಂದ ಗೊತ್ತಾಗಿದೆ ಎಂದು ತಿಳಿಸಿದರು.

ADVERTISEMENT

‘ಧನುಷ್‌ ಮತ್ತು ಕಿಶನ್‌ ಅಣ್ಣ, ತಮ್ಮಂದಿರು. ಈ ಇಬ್ಬರೂ ಕೊಟ್ಟಾರ ಚೌಕಿ ಸುತ್ತಮುತ್ತ ಹಿಂದೆ ಓಡಾಡಿದ್ದರು. ಬಶೀರ್‌ ಅವರ ಫಾಸ್ಟ್‌ಫುಡ್‌ ಮಳಿಗೆಗೂ ಹೋಗಿದ್ದರು. ಮುಸ್ಲಿಂ ಧರ್ಮಕ್ಕೆ ಸೇರಿದ ಯಾವುದಾದರೂ ವ್ಯಕ್ತಿಗಳನ್ನು ಕೊಲೆ ಮಾಡುವ ಉದ್ದೇಶದಿಂದ ಆರೋಪಿಗಳೆಲ್ಲರೂ ಬುಧವಾರ ರಾತ್ರಿ ಬೈಕ್‌ನಲ್ಲಿ ಬಂದಿದ್ದರು. ಆಗ ಎದುರಿಗೆ ಸಿಕ್ಕ ಬಶೀರ್‌ ಕೊಲೆಗೆ ಯತ್ನಿಸಿದ್ದರು’ ಎಂದರು.

ಹಿಂದೆಯೂ ಮಾಡಿದ್ದರು
ಶರತ್‌ ಮಡಿವಾಳ ಹತ್ಯೆಗೆ ಪ್ರತೀಕಾರ ಎಂಬಂತೆ ಕಿಶನ್‌ ಮತ್ತು ಧನುಷ್‌ 2017ರ ಜುಲೈ 7ರಂದು ಅಡ್ಯಾರ್‌ನಲ್ಲಿ ವಿದ್ಯಾರ್ಥಿಯೊಬ್ಬನಿಗೆ ಇರಿದಿದ್ದರು. ಅಡ್ಯಾರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮ ನಡೆಯುವ ಹೊತ್ತಿನಲ್ಲೇ ಕೃತ್ಯ ಎಸಗಿದ್ದರು. ಈ ಪ್ರಕರಣದಲ್ಲಿ ಬಂಧಿತರಾಗಿದ್ದ ಇಬ್ಬರೂ, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು ಎಂದು ಕಮಿಷನರ್ ತಿಳಿಸಿದರು.

ಕಿಶನ್‌ ವಿರುದ್ಧ ಅತ್ಯಾಚಾರ, ಹಫ್ತಾ ವಸೂಲಿ, ಕೊಲೆಯತ್ನ ಆರೋಪದಡಿ ಮೂರು ಪ್ರಕರಣಗಳಿವೆ. ಧನುಷ್‌ ವಿರುದ್ಧ ಕೊಲೆ ಯತ್ನ, ದೊಂಬಿ ಸೃಷ್ಟಿಸಲು ಯತ್ನಿಸಿದ ಆರೋಪದಡಿ ಒಂದು ಪ್ರಕರಣವಿದೆ. ಶ್ರೀಜಿತ್‌ ವಿರುದ್ಧ ಕಾಸರಗೋಡು ಜಿಲ್ಲೆಯಲ್ಲಿ ಆರು ಹಾಗೂ ನಗರದ ಉಳ್ಳಾಲ ಠಾಣೆಯಲ್ಲಿ ಒಂದು ಪ್ರಕರಣವಿದೆ. ಈತನ ವಿರುದ್ಧ ವೇಶ್ಯಾವಾಟಿಕೆಗಾಗಿ ಅಪ್ರಾಪ್ತ ಮಕ್ಕಳ ಬಳಕೆ, ಉದ್ದೇಶಪೂರ್ವಕವಲ್ಲದ ಕೊಲೆ, ದರೋಡೆ ಮತ್ತಿತರ ಆರೋಪಗಳಿವೆ. ಸಂದೇಶ್‌ ವಿರುದ್ಧ ಕಾಸರಗೋಡಿನ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಅಪಹರಣ ಮತ್ತು ದೊಂಬಿ ನಡೆಸಿದ ಆರೋಪದಡಿ ಒಂದು ಪ್ರಕರಣವಿದೆ ಎಂದರು.

ಎಲ್ಲ ಆರೋಪಿಗಳೂ ರೌಡಿ ಪಟ್ಟಿಯಲ್ಲಿದ್ದಾರೆ. ಶ್ರೀಜಿತ್‌ ಮತ್ತು ಸಂದೇಶ್‌ಗೆ ಸಂಬಂಧಿಸಿದಂತೆ ಕೇರಳ ಪೊಲೀಸರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕಿಶನ್‌ ಮತ್ತು ಧನುಷ್‌ ವಿರುದ್ಧ ಗೂಂಡಾ ಕಾಯ್ದೆ ಜಾರಿಗೆ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ತಿಳಿಸಿದರು.

ಶ್ರೀರಾಮಸೇನೆಯಿಂದ ಬಜರಂಗದಳಕ್ಕೆ
‘ಅಡ್ಯಾರ್‌ನಲ್ಲಿ ವಿದ್ಯಾರ್ಥಿಗೆ ಇರಿದ ಸಂದರ್ಭದಲ್ಲಿ ಶ್ರೀರಾಮಸೇನೆಯಲ್ಲಿದ್ದೆವು. ಆ ಪ್ರಕರಣದಲ್ಲಿ ಶ್ರೀರಾಮಸೇನೆ ನಮಗೆ ಬೆಂಬಲ ನೀಡಲಿಲ್ಲ. ಬಳಿಕ ಬಜರಂಗದಳ ಸೇರಿದ್ದೇವೆ’ ಎಂದು ಕಿಶನ್‌ ಮತ್ತು ಧನುಷ್‌ ವಿಚಾರಣೆ ವೇಳೆ ತನಿಖಾ ತಂಡಕ್ಕೆ ಮಾಹಿತಿ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

‘ಆರೋಪಿಗಳು ಕೆಲವು ಸಂಘಟನೆಗಳ ಹೆಸರು ಹೇಳಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಕಮಿಷನರ್‌ ಟಿ.ಆರ್‌.ಸುರೇಶ್‌ ತಿಳಿಸಿದರು.

ಎಸಿಪಿಗಳಿಂದ ತನಿಖೆ
ದೀಪಕ್‌ ರಾವ್‌ ಕೊಲೆ ಪ್ರಕರಣದ ತನಿಖಾಧಿಕಾರಿಯನ್ನಾಗಿ ಸಂಚಾರ ವಿಭಾಗದ ಎಸಿಪಿ ಎಂ.ಮಂಜುನಾಥ ಶೆಟ್ಟಿ ಅವರನ್ನು ನೇಮಿಸಲಾಗಿದೆ. ಬಶೀರ್‌ ಕೊಲೆಯತ್ನ ಪ್ರಕರಣದ ತನಿಖೆಯ ಹೊಣೆಯನ್ನು ನಗರ ಅಪರಾಧ ದಾಖಲೆಗಳ ಘಟಕದ (ಸಿಸಿಆರ್‌ಬಿ) ಎಸಿಪಿ ವೆಲೆಂಟೈನ್‌ ಡಿಸೋಜ ಅವರಿಗೆ ನೀಡಲಾಗಿದೆ. ಬಶೀರ್‌ ಕೊಲೆಯತ್ನ ನಡೆಸಿದ ಆರೋಪಿಗಳನ್ನು ತ್ವರಿತವಾಗಿ ಬಂಧಿಸಿರುವ ಸಿಸಿಬಿ ಇನ್‌ಸ್ಪೆಕ್ಟರ್‌ ಶಾಂತಾರಾಂ, ಸಬ್‌ ಇನ್‌ಸ್ಪೆಕ್ಟರ್‌ ಶ್ಯಾಮ್‌ ಸುಂದರ್‌ ಮತ್ತು ತಂಡಕ್ಕೆ ಬಹುಮಾನ ನೀಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.