ADVERTISEMENT

ನಮ್ಮ ಬದುಕಿನಲ್ಲಿ ಹಸ್ತಕ್ಷೇಪ ಮಾಡಬೇಡಿ: ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಗೆ ತಾಕೀತು

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 15:12 IST
Last Updated 6 ಜನವರಿ 2018, 15:12 IST
ನಮ್ಮ ಬದುಕಿನಲ್ಲಿ ಹಸ್ತಕ್ಷೇಪ ಮಾಡಬೇಡಿ: ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಗೆ ತಾಕೀತು
ನಮ್ಮ ಬದುಕಿನಲ್ಲಿ ಹಸ್ತಕ್ಷೇಪ ಮಾಡಬೇಡಿ: ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಗೆ ತಾಕೀತು   

ಮಂಗಳೂರು: ನಗರದ ಹೊರವಲಯದ ಪಿಲಿಕುಳ ನಿಸರ್ಗಧಾಮದ ಆವರಣದಲ್ಲಿನ ವಾಟರ್‌ ಅಮ್ಯೂಸ್‌ಮೆಂಟ್‌ ಪಾರ್ಕ್‌ಗೆ ಮಂಗಳವಾರ ಬೆಳಿಗ್ಗೆ ಒಟ್ಟಾಗಿ ಬಂದಿದ್ದ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಧರ್ಮೀಯ ವಿದ್ಯಾರ್ಥಿಗಳ ಮೇಲೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಗುಂಪೊಂದು ಹಲ್ಲೆ ನಡೆಸಿತ್ತು. ಅನ್ಯ ಧರ್ಮದ ವಿದ್ಯಾರ್ಥಿಗಳು ಹೇಗೆ ಒಟ್ಟಾಗಿ ಬಂದಿದ್ದನ್ನು ನೋಡಿದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಈ ವಿದ್ಯಾರ್ಥಿಗಳನ್ನು ಬೈದು, ದೈಹಿಕ ಹಲ್ಲೆ ನಡೆಸಿದ್ದಾರೆ. ಆದಾಗ್ಯೂ, ಈ ವಿದ್ಯಾರ್ಥಿಗಳು ಮನೆಯಲ್ಲಿ ಅನುಮತಿ ಪಡೆದೇ ಪಾರ್ಕ್ ಗೆ ಬಂದಿದ್ದರು. ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಈಗಾಗಲೇ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ 11.30ಕ್ಕೆ ಈ ಪ್ರಕರಣ ನಡೆದಿದೆ. ಕಿನ್ನಿಗೋಳಿ ಸಮೀಪದ ಕಾಲೇಜೊಂದರಲ್ಲಿ ಓದುತ್ತಿರುವ ಹಿಂದೂ ಧರ್ಮದ ಒಬ್ಬ ವಿದ್ಯಾರ್ಥಿನಿ, ಕ್ರೈಸ್ತ ಧರ್ಮದ ಒಬ್ಬ ವಿದ್ಯಾರ್ಥಿನಿ ಮತ್ತು ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳು ಒಟ್ಟಾಗಿ ನಿಸರ್ಗಧಾಮಕ್ಕೆ ಬಂದಿದ್ದು, ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ಹಲ್ಲೆಗೊಳಗಾಗಿದ್ದರು. ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಹಿಂದೂ ವಿದ್ಯಾರ್ಥಿನಿಯ ತಾಯಿ, ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ನಮ್ಮ ಬದುಕಿನಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳ ಮೇಲೆ ನಡೆದಿರುವ ಹಲ್ಲೆ ಖಂಡಿಸಿದ ಈ ಅಮ್ಮ, ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ವಿರುದ್ಧ ಪೊಲೀಸರಿಗೆ ನೀಡಿದ ದೂರು ಬಗ್ಗೆ ನಿಲುವು ಬದಲಿಸಲಾರೆ ಎಂದಿದ್ದಾರೆ.

ADVERTISEMENT

[related]

ಈ ಬಗ್ಗೆ ದಿ ನ್ಯೂಸ್ ಮಿನಿಟ್ ಸುದ್ದಿತಾಣದ ಜತೆ ಮಾತನಾಡಿದ ರೇಖಾ (ಹೆಸರು ಬದಲಿಸಲಾಗಿದೆ) ಮಾನಸ ವಾಟರ್ ಪಾರ್ಕ್ ಗೆ ಪಿಕ್‍ನಿಕ್‍ಗೆ ಹೋಗುವ ಮುನ್ನ ನನ್ನ ಮಗಳು ನಮ್ಮಲ್ಲಿ ಪೂರ್ವಾನುಮತಿ ಪಡೆದಿದ್ದಳು. ಈ ಹುಡುಗನ ಜತೆ ಅವಳು ಮಾತ್ರ ಅಲ್ಲ ಇನ್ನಿತರ ಹುಡುಗಿಯರೂ ಇದ್ದರು. ಹೀಗಿರುವಾಗ ನಮ್ಮ ವೈಯಕ್ತಿಕ ಬದುಕಿನಲ್ಲಿ ಬೇರೊಬ್ಬರು ಹಸ್ತಕ್ಷೇಪ ಮಾಡುವುದು ಬೇಡ ಎಂದಿದ್ದಾರೆ.

ವಾಟರ್ ಪಾರ್ಕ್ ನಿಂದ ಹೊರಡುವ ಹೊತ್ತಿಗೆ ಹಿಂದೂ ಜಾಗರಣ ವೇದಿಕೆಯ ಸುಮಾರು 30 ಕಾರ್ಯಕರ್ತರು ಗೇಟಿನ ಹೊರಗೆ ನಿಂತಿದ್ದಾರೆ ಎಂದು ಪಾರ್ಕ್ ನ ಸೆಕ್ಯೂರಿಟಿ ಹೇಳಿದ್ದರಂತೆ. ವಿದ್ಯಾರ್ಥಿಗಳು ಯಾರೂ ಪಾರ್ಕ್ ಆವರಣ ಬಿಟ್ಟು ಹೊರಗೆ ಹೋಗಬೇಡಿ ಎಂದು ಸೆಕ್ಯೂರಿಟಿ ಹೇಳಿದ್ದರು. ಅಷ್ಟೇ ಅಲ್ಲದೆ ಪೊಲೀಸರಿಗೆ ಕರೆ ಮಾಡಿ ಸಹಾಯ ಮಾಡುವಂತೆ ಬೇಡಿದ್ದರು. ವಿದ್ಯಾರ್ಥಿಗಳು ಅಲ್ಲಿಂದ ಹೊರಬಂದಾಗ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ಗುಂಪು ಅವಾಚ್ಯ ಪದಗಳಿಂದ ಬೈದಿದ್ದಾರೆ. ಅಲ್ಲಿಂದ ಬೇಗನೆ ಹೊರಡಲು ವಿದ್ಯಾರ್ಥಿಗಳು ಯತ್ನಿಸಿದಾಗ ಆ ಕಾರ್ಯಕರ್ತರು ಬೊಬ್ಬೆ ಹಾಕಿ ಬೆದರಿಸಿದ್ದಾರೆ. ಅನ್ಯ ಧರ್ಮದ ಹುಡುಗನೊಂದಿಗೆ ತಿರುಗಾಡುತ್ತಿರುವುದೇಕೆ ಎಂದು ಅವರು ನಮ್ಮನ್ನು ಪ್ರಶ್ನಿಸಿದ್ದಾರೆ ಎಂದು ಮಗಳು ನಡೆದ ಘಟನೆಯನ್ನು ವಿವರಿಸಿದ್ದಾಳೆ ಅಂತಾರೆ ರೇಖಾ.

ಅಷ್ಟೊಂದು ಕಾರ್ಯಕರ್ತರನ್ನು ಚದುರಿಸಲು ಪೊಲೀಸರ ಸಂಖ್ಯೆಯೂ ಕಡಿಮೆ ಇತ್ತು ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ.

</p><p>ಈ ಪ್ರಕರಣ ವಿಡಿಯೊ ದೃಶ್ಯಾವಳಿಗಳನ್ನು ಗಮನಿಸಿದರೆ ಕೆಂಪು  ಮತ್ತು ಕಪ್ಪು ಪಟ್ಟಿ ಟೀಶರ್ಟ್ ಧರಿಸಿದ ವ್ಯಕ್ತಿಯೊಬ್ಬರು ಹೆಣ್ಮಕ್ಕಳನ್ನು ಪೊಲೀಸ್ ವಾಹನದತ್ತ ನೂಕುತ್ತಿರುವುದು ಕಾಣುತ್ತದೆ. ಆಮೇಲೆ ಆ ಗುಂಪಿನಲ್ಲಿದ್ದ ಕಾರ್ಯಕರ್ತ  ಪೊಲೀಸರ ಕಣ್ಮುಂದೆಯೇ ಹುಡುಗಿಯೊಬ್ಬಳ ತಲೆಗೆ ಹೊಡೆಯುತ್ತಿರುವುದು ಕಾಣುತ್ತದೆ.</p><p>ಅಲ್ಲಿ ಏನಾಗುತ್ತದೆ ಎಂದು ತಕ್ಷಣ ಗೊತ್ತಾಗಲಿಲ್ಲ. ಆಮೇಲೆ ತಿರುಗಿ ನೋಡಿದರೆ ಟೀಶರ್ಟ್ ಧರಿಸಿದ್ದ ಆ ವ್ಯಕ್ತಿ ಕೆಟ್ಟ ಪದಗಳಿಂದ ನನ್ನನ್ನು ಬೈಯುತ್ತಿದ್ದಾರೆ ಎಂದಿದ್ದಾಳೆ ಹಲ್ಲೆಗೊಳಗಾದ ವಿದ್ಯಾರ್ಥಿನಿ.</p><p>ಮಾನಸ ವಾಟರ್ ಪಾರ್ಕ್ ಗೆ  ಯಾರಿಗೆ ಬೇಕಾದರೂ ಹೋಗಬಹುದು. ಪಬ್, ಥಿಯೇಟರ್, ಧಾರ್ಮಿಕ ಕ್ಷೇತ್ರಗಳಲ್ಲಿ ದಾಳಿ ನಡೆಸಿದ ನಂತರ ಇದೀಗ ಕುಟುಂಬಗಳು ಸೇರುವ ಪ್ರದೇಶಗಳಲ್ಲಿಯೂ ಸಂಸ್ಕೃತಿಯ ರಕ್ಷಕರು ದಾಳಿ ನಡೆಸುತ್ತಿದ್ದಾರೆ. ಹೀಗೆ ಮುಂದುವರಿದರೆ ಮುಂದೊಂದು ದಿನ ಇಡೀ ನಗರವೇ ಅವರ ಮುಷ್ಠಿಯಲ್ಲಿರಲಿದೆ ಎಂದು ಸಂತ್ರಸ್ತೆಯ ಸಂಬಂಧಿಯೊಬ್ಬರು ಹೇಳಿದ್ದಾರೆ.</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.