ಹೊಸಪೇಟೆ: ರಾಜ್ಯದಲ್ಲಿ ಕ್ರಿಮಿನಲ್ ಚಟುವಟಿಕೆಗಳು ಹೆಚ್ಚಾಗಿವೆ. ಸುಳ್ಳು ಕಥೆಗಳನ್ನು ಕಟ್ಟಿ ನುಣುಚಿಕೊಳ್ಳುತ್ತಿರುವುದು ಸರಿಯಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಇದರ ಮೇಲೆ ನಿಗಾ ವಹಿಸಬೇಕು. ತಡೆಯಲು ಆಗದಿದ್ದರೆ ಅಧಿಕಾರದಲ್ಲಿ ಏಕಿರಬೇಕು ಎಂದು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ರಾಜ್ಯ ಸಚಿವ ರಮೇಶ ಜಿಗಜಿಣಗಿ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಂಗಳೂರಿನಲ್ಲಿ ಇನ್ನೆಷ್ಟು ಜನರ ಕೊಲೆಗಳಾಗಬೇಕು. ನಿಮ್ಮಿಂದ ತಡೆಯಲು ಸಾಧ್ಯವಿಲ್ಲವೇ.
ಮರಳು ಮಾಫಿಯಾ ಹೆಚ್ಚಾಗಿದೆ. ನಾನು ಭೀಮಾ ತೀರದವನು. ಅಲ್ಲಿನ ರಸ್ತೆಗಳು ಹಾಳಾಗಿವೆ. ಕಾವೇರಿ ಕಣಿವೆಯಲ್ಲೂ ಇದೇ ಸ್ಥಿತಿ ಇದೆ. ಮರಳು ಮಾಫಿಯಾದಲ್ಲಿ ಪ್ರಭಾವಿ ಮಂತ್ರಿಗಳು ಶಾಮಿಲಾಗಿದ್ದರೂ ಅದನ್ನು ತಡೆಯಲು ಏಕೆ ಆಗುತ್ತಿಲ್ಲ. ಬಡವರು ಮನೆ ಕಟ್ಟಲು ಮರಳು ಸಿಗುತ್ತಿಲ್ಲ ಎಂದರು.
ಪಕ್ಷಕ್ಕಿಂತ ಯಾರು ದೊಡ್ಡವರಲ್ಲ. ಪಕ್ಷದ ಹೆಸರಿನಲ್ಲಿ ನಾವೆಲ್ಲರೂ ಗೆದ್ದು ಬರುತ್ತೇವೆ. ನಾನೇ ದೊಡ್ಡವನು ಎಂದು ತಿಳಿಯಬಾರದು. ಹಾಗಾದರೆ ಎಲ್ಲರೂ ಪಕ್ಷೇತರರಾಗಿ ಗೆಲ್ಲಬಹುದಿತ್ತು ಎಂದು ಶಾಸಕ ಆನಂದ್ ಸಿಂಗ್ ಅವರು ಬಿಜೆಪಿ ಪರಿವರ್ತನಾ ಯಾತ್ರೆಗೆ ಗೈರಾಗಿದ್ದಕ್ಕೆ ಪ್ರತಿಕ್ರಿಯಿಸಿದರು.
2030ರ ಒಳಗೆ ದೇಶದ ಎಲ್ಲ ಹಳ್ಳಿಗಳಿಗೂ ಶುದ್ಧ ಕುಡಿಯುವ ನೀರು ಪೂರೈಸುವ ಗುರಿ ಹೊಂದಲಾಗಿದೆ. 2019ರ ಒಳಗೆ ದೇಶವನ್ನು ಬಯಲು ಶೌಚಮುಕ್ತಗೊಳಿಸಲಾಗುವುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.