ADVERTISEMENT

ಯಡಿಯೂರಪ್ಪ ಹೆಣ ಹೊರಲು ಬಿಜೆಪಿಯ ನಾಲ್ವರು ನಾಯಕರು: ಸಿದ್ದನಗೌಡ ಪಾಟೀಲ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 19:50 IST
Last Updated 7 ಜನವರಿ 2018, 19:50 IST
ಸಿದ್ದನಗೌಡ ‍ಪಾಟೀಲ
ಸಿದ್ದನಗೌಡ ‍ಪಾಟೀಲ   

ಮೈಸೂರು: ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಹೆಣ ಹೊರಲು ಬಿಜೆಪಿಯ ನಾಲ್ವರು ನಾಯಕರು ಸಿದ್ಧರಾಗುತ್ತಿದ್ದಾರೆ. ಅವರೇ ಶೋಭಾ ಕರಂದ್ಲಾಜೆ, ಅನಂತಕುಮಾರ ಹೆಗಡೆ, ಪ್ರತಾಪ ಸಿಂಹ ಹಾಗೂ ಸಿ.ಟಿ.ರವಿ’ ಎಂದು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಸಿದ್ದನಗೌಡ ಪಾಟೀಲ ವ್ಯಂಗ್ಯವಾಡಿದರು.

ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಸಿಪಿಐ 12ನೇ ಜಿಲ್ಲಾ ಸಮ್ಮೇಳ ನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಈ ನಾಲ್ವರು ಬಾಯಿಗೆ ಬಂದ ಹಾಗೆ ಮಾತನಾಡುವುದರಲ್ಲಿ ತುಂಬಾ ನಿಸ್ಸೀಮರು. ಒಬ್ಬರು ಸಂವಿಧಾನ ಬದಲಿಸುತ್ತೇವೆ ಎಂದು ಹೇಳುತ್ತಾರೆ. ಜಾತ್ಯತೀತರ ಬಗ್ಗೆ ತುಂಬಾ ಕೀಳಾಗಿ ಮಾತನಾಡುತ್ತಾರೆ. ಇನ್ನುಳಿದವರು ಟಿಪ್ಪು ಜಯಂತಿ ಬೇಡ ಎಂದು ಎಲ್ಲೆಡೆ ಕೂಗಾಡುತ್ತಾರೆ. ನಾನು ಈ ಕುರಿತು ಯಡಿಯೂರಪ್ಪ ಅವರಿಗೆ ಸಲಹೆ ಕೊಡಬೇಕೆಂದಿದ್ದೇನೆ. ಬಾಯಿಗೆ ಬೀಗ ಹಾಕಿಕೊಳ್ಳುವಂತೆ ಈ ನಾಲ್ವರಿಗೆ ಈಗಲೇ ಎಚ್ಚರಿಕೆ ನೀಡಬೇಕು. ಇಲ್ಲದಿದ್ದರೆ ಅವರೇ ಯಡಿಯೂರಪ್ಪ ಅವರ ಹೆಣ ಹೊರುತ್ತಾರೆ’ ಎಂದು ಹೇಳಿದರು.

ADVERTISEMENT

ಜನಸಾಮಾನ್ಯರಿಗೆ ಅನುಕೂಲ ವಾಗುವ ಒಂದೂ ಮಾತನ್ನು ಇವರು ಆಡುವುದಿಲ್ಲ. ದೇಶದಲ್ಲಿ ಕಾರ್ಮಿಕರು, ಕೃಷಿಕರ ಮೇಲೆ ದಬ್ಬಾಳಿಕೆಯಾಗುತ್ತಿದೆ. ಜನಸಾಮಾನ್ಯರ ಹಣವನ್ನು ಉದ್ಯಮಿಗಳಿಗೆ ಹಂಚಲಾಗುತ್ತಿದೆ. ಇದನ್ನು ಪ್ರಶ್ನಿಸಲು ಈ ನಾಲ್ವರಿಗೆ ಮಾತು ಬರುವುದಿಲ್ಲ. ಬಾಯಿ ಬಿಟ್ಟರೆ ಕೋಮು ಸೌಹಾರ್ದ ಕೆಡಿಸುವ ಮಾತನ್ನಾಡುತ್ತಾರೆ.

ಈ ರೀತಿಯ ಮಾತುಗಳು ಅವರಿಗೇ ಮುಳುವಾಗುವುದರಲ್ಲಿ ಸಂದೇಹವಿಲ್ಲ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.