ಬೆಂಗಳೂರು: ಅಂತರ ನಿಗಮ ವರ್ಗಾವಣೆಗೆ ಅವಕಾಶ ಪಡೆದಿರುವ ಚಾಲಕ–ನಿರ್ವಾಹಕರಿಗೆ ಇದೇ 17, 18 ಮತ್ತು 19ರಂದು ಆದೇಶ ಪತ್ರ ನೀಡಲಾಗುವುದು ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ತಿಳಿಸಿದರು.
ಹತ್ತು ವರ್ಷಗಳ ನಂತರ ಅಂತರ ನಿಗಮ ವರ್ಗಾವಣೆ ಮಾಡಲಾಗಿದೆ. 14,000 ಅರ್ಜಿಗಳು ಬಂದಿದ್ದು, 4,000 ಜನರಿಗೆ ಅವಕಾಶ ದೊರೆತಿದೆ ಎಂದು ಸೋಮವಾರ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಾಲಕ ವೃತ್ತಿ ಆರಿಸಿಕೊಳ್ಳುವ ಜನ ಕಡಿಮೆ. ಬೇರೆ ಜಿಲ್ಲೆಯವರನ್ನೇ ಅಲ್ಲಿಗೆ ನಿಯೋಜಿಸಲಾಗಿದೆ. ಆದರೆ, ಅಲ್ಲಿರುವ ಎಲ್ಲರೂ ವರ್ಗಾವಣೆ ಬಯಸುತ್ತಿದ್ದಾರೆ. ಈ ರೀತಿಯ ಕಾರಣಗಳಿಂದಾಗಿ ವಿಳಂಬವಾಗಿದೆ. ಕೌನ್ಸೆಲಿಂಗ್ ನಡೆಸಿ ಜ್ಯೇಷ್ಠತೆ ಆಧರಿಸಿ ವರ್ಗಾವಣೆ ಮಾಡಲಾಗಿದೆ ಎಂದು ಹೇಳಿದರು.
‘ಸಾರಿಗೆ ಸಂಸ್ಥೆಗಳ ನೌಕರರು ಇದೇ 18ರಂದು ನಮ್ಮ ಮನೆ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿರುವ ವಿಷಯ ಗೊತ್ತಿಲ್ಲ’ ಎಂದು ಪ್ರತಿಕ್ರಿಯಿಸಿದರು.
ಅಂತರ ರಾಜ್ಯ ಬಸ್ಗಳ ಸೇವೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಕೇರಳ, ತಮಿಳುನಾಡು, ತೆಲಂಗಾಣ ರಾಜ್ಯದ ಸಾರಿಗೆ ಇಲಾಖೆ ಸಹಕಾರ ನೀಡಲು ಮುಂದೆ ಬಂದಿದ್ದು, ಒಪ್ಪಂದ ಪ್ರಕ್ರಿಯೆಗಳು ನಡೆಯುತ್ತಿವೆ ಎಂದೂ ತಿಳಿಸಿದರು.
ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಡಿಕೇರಿ ಮತ್ತು ತಮಿಳುನಾಡಿನ ಸೇಲಂಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ(ಕೆಎಸ್ಆರ್ಟಿಸಿ) ಫ್ಲೈ ಬಸ್ ಸೇವೆ ಆರಂಭಿಸಲಾಯಿತು.
ಸೇಲಂ, ಮಡಿಕೇರಿಗೆ ಫ್ಲೈ ಬಸ್
ಸೇಲಂಗೆ ₹ 800 ಮತ್ತು ಮಡಿಕೇರಿಗೆ ₹ 1,000 ದರ ನಿಗದಿ ಮಾಡಲಾಗಿದೆ. ಅಂತರ ರಾಷ್ಟ್ರೀಯ ಗುಣಮಟ್ಟದ ಈ ಬಸ್ಗಳಲ್ಲಿ ಶೌಚಾಲಯ ವ್ಯವಸ್ಥೆ ಇದ್ದು, ಈ ಬಸ್ಗಳಿಗೆ ತಲಾ ₹1.10 ಕೋಟಿ ವೆಚ್ಚವಾಗಿದೆ. ಅಂತರ ರಾಜ್ಯ ಫ್ಲೈ ಬಸ್ ಸೇವೆ ಆರಂಭಿಸಿದ ಮೊದಲ ಸಾರಿಗೆ ಸಂಸ್ಥೆ ಇದು ಎಂದು ಎಚ್.ಎಂ. ರೇವಣ್ಣ ಹೇಳಿದರು.
2014ರಲ್ಲಿ ಮೈಸೂರಿಗೆ ಫ್ಲೈ ಬಸ್ ಸೇವೆ ಆರಂಭಿಸಲಾಗಿದ್ದು, ಈವರೆಗೆ 3.90 ಲಕ್ಷ ಜನ ಪ್ರಯಾಣಿಸಿದ್ದಾರೆ. ಬೇರೆ ಬೇರೆ ನಗರಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಸದ್ಯದಲ್ಲೇ ಇನ್ನೂ ಏಳು ನಗರಗಳಿಗೆ ಸೇವೆ ವಿಸ್ತರಿಸಲಾಗುವುದು ಎಂದು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.