ಉಳ್ಳಾಲ: ಮಸೀದಿ ಹಾಗೂ ಅಂಗಡಿಗಳಿಗೆ ಸೋಮವಾರ ಹಾನಿಮಾಡಿ ಗಲಭೆಗೆ ಸಂಚು ರೂಪಿಸಿದ ಇಬ್ಬರನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.
ಘಟನೆಯನ್ನು ಖಂಡಿಸಿ, ಕೃತ್ಯಕ್ಕೆ ಬೆಂಬಲ ನೀಡಿದವರನ್ನೂ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಾಟೆಕಲ್ ವರ್ತಕರ ಸಂಘದವರು ಅಂಗಡಿ ಮುಂಗಟ್ಟುಗಳನ್ನು ಬಂದ್ ನಡೆಸಿ ಪ್ರತಿಭಟನೆ ನಡೆಸಿದರು.
‘ಸುಳ್ಯದ ಏನೆಕಲ್ನ ಯತಿರಾಜ್ ಮತ್ತು ಬೀದಿಗುಡ್ಡೆಯ ನಿತಿನ್ ಬಂಧಿತರು. ಇವರು ತಡರಾತ್ರಿ ಬೈಕಿನಲ್ಲಿ ಬಂದು ನಾಟೆಕಲ್ ಜಂಕ್ಷನ್ನಲ್ಲಿರುವ ರಕ್ಷೀದಿ ಮಸೀದಿಯ ಎರಡು ಟ್ಯೂಬ್ ಲೈಟ್ ಮತ್ತು ಸಿಎಫ್ಎಲ್ ಬಲ್ಬ್ ಗಳನ್ನು ಪುಡಿ ಮಾಡಿದ್ದರು. ಬೇಕರಿಗಳು, ಅಂಗಡಿಗಳಲ್ಲಿ ಸಾಮಗ್ರಿಗಳಿಗೆ ಹಾನಿ ಮಾಡಿದ್ದರು. ಕೊಣಾಜೆ ಪೊಲೀಸರು ಬರುವಷ್ಟರಲ್ಲಿ ಪರಾರಿಯಾಗಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಕೊಣಾಜೆ ಸಮೀಪ ನೇಮೋತ್ಸವದಲ್ಲಿ ಭಾಗವಹಿಸಲೆಂದು ಇಬ್ಬರೂ ಮಾಲೀಕ ಮಂಜುನಾಥ್ ಆಳ್ವ ಅವರ ಬೈಕ್ ಅನ್ನು ಪಡೆದುಕೊಂಡಿದ್ದರು. ತೆರಳುವಾಗ ಮದ್ಯ ಸೇವಿಸಿದ್ದ ಇವರು, ಅಮಲಿನಲ್ಲೇ ಕೃತ್ಯ ಎಸಗಿ ಪರಾರಿಯಾಗಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಾಲೀಕ ವಶಕ್ಕೆ:
ನೀರು ಸರಬರಾಜು ಲಾರಿ ಮಾಲೀಕ ಮಂಜುನಾಥ್ ಆಳ್ವ ಅವರನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.