ಮಂಗಳೂರು: ಶಿರಾಡಿ ಘಾಟಿ ಮಾರ್ಗದ ಗುಂಡ್ಯ ಸಮೀಪದ ಕೊಡ್ಯಕಲ್ಲು ಎಂಬಲ್ಲಿ ಎಲ್ಪಿಜಿ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ಉರುಳಿ ಬಿದ್ದಿದೆ. ಟ್ಯಾಂಕರ್ ನಿಂದ ಅನಿಲ ಸೋರಿಕೆಯಾಗುತ್ತಿದ್ದು, ಈ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.
'ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಉರುಳಿ ಬಿದ್ದಿದೆ. ಅನಿಲ ಸೋರಿಕೆಯಾಗುತ್ತಿದ್ದು, ಅದನ್ನು ನಿಲ್ಲಿಸಲು ಕಾರ್ಯಾಚರಣೆ ನಡೆಯುತ್ತಿದೆ. ಟ್ಯಾಂಕರ್ ಸ್ಥಳಾಂತರ ಮಾಡುವವರೆಗೂ ಈ ಮಾರ್ಗದ ವಾಹನಗಳನ್ನು ಬೇರೆ ಮಾರ್ಗದ ಮೂಲಕ ಕಳುಹಿಸಲಾಗುವುದು' ಎಂದು ದಕ್ಷಿಣ ಕನ್ನಡ ಎಸ್ಪಿ ಸಿ.ಎಚ್.ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಅಪಘಾತಕ್ಕೀಡಾಗಿರುವ ಟ್ಯಾಂಕರ್ ಮಂಗಳೂರಿನಿಂದ ಬೆಂಗಳೂರಿಗೆ ಅನಿಲ ಸಾಗಿಸುತ್ತಿತ್ತು.
ಸಂಚಾರ ಸ್ಥಗಿತ:
ಟ್ಯಾಂಕರ್ ಅವಘಡದ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಅನ್ವಯವಾಗುವಂತೆ ಗುರುವಾರ (ಜ.11) ಬೆಳಿಗ್ಗೆ 7.30 ಗಂಟೆಯವರೆಗೆ ಶಿರಾಡಿ ಘಾಟಿಯಲ್ಲಿ ಎಲ್ಲಾ ತರಹದ ವಾಹನಗಳ ಸಂಚಾರವನ್ನು ತಡೆ ಹಿಡಿಯಲಾಗಿದೆ.
ವಾಹನಗಳು ಪರ್ಯಾಯವಾಗಿ ಚಾರ್ಮಾಡಿ ಅಥವಾ ಮಾಣಿ-ಮಡಿಕೇರಿ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.