ಬೆಂಗಳೂರು: ‘ಗ್ರಾಹಕರ ಸಂರಕ್ಷಣಾ ಕಾಯ್ದೆ–1986ರ ಕಲಂ 16(1)(ಬಿ)ಗೆ ತಿದ್ದುಪಡಿಗೆ ಸಚಿವ ಸಂಪುಟದ ಒಪ್ಪಿಗೆ ದೊರೆತಿದ್ದು, ವಿಧಾನಮಂಡಲದ ಅಧಿವೇಶನದಲ್ಲಿ ಇನ್ನಷ್ಟೇ ಒಪ್ಪಿಗೆ ಪಡೆಯಬೇಕಿದೆ’ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.
ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ರಾಷ್ಟ್ರೀಯ ಗ್ರಾಹಕರ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು. ‘ಹೊಸ ತಿದ್ದುಪಡಿ ಕಾಯ್ದೆ ಪ್ರಕಾರ, ಉತ್ಪನ್ನಗಳಲ್ಲಿ ದೋಷ ಕಂಡುಬಂದರೆ ಆ ಉತ್ಪನ್ನದ ಜಾಹೀರಾತಿನಲ್ಲಿ ಅಭಿನಯಿಸಿದ ಕಲಾವಿದರ ವಿರುದ್ಧವೂ ಕ್ರಮಕೈಗೊಳ್ಳಬಹುದು. ಹಾಗೆಯೇ, ಆನ್ಲೈನ್ ಮೂಲಕ ಖರೀದಿಸಿದ ಉತ್ಪನ್ನ ಸರಿಯಿರದಿದ್ದರೆ ಅದನ್ನು ತಲುಪಿಸಿದ ಮಧ್ಯವರ್ತಿ ವಿರುದ್ಧವೂ ಪ್ರಕರಣ ದಾಖಲಿಸಬಹುದು’ ಎಂದು ವಿವರಿಸಿದರು.
‘ಆಹಾರ ಪದಾರ್ಥಗಳಲ್ಲಿ ತೂಕ, ಗುಣಮಟ್ಟ ಹಾಗೂ ಬೆಲೆಯಲ್ಲಿ ಮೋಸ ನಡೆಯುತ್ತಿದೆ ಎನ್ನುವುದು ತಿಳಿದುಬಂದ ತಕ್ಷಣ 1967 ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಬೇಕು. ಜನರು ಜಾಗೃತರಾದರೆ, ಮೋಸ ಮಾಡುವವರ ಪ್ರಮಾಣ ಕಡಿಮೆಯಾಗುತ್ತದೆ’ ಎಂದು ಹೇಳಿದರು.
ಇಲಾಖೆಯ ಆಯುಕ್ತೆ ವಿ. ಚೈತ್ರಾ, ‘ಎಲ್ಲಾ ಜಿಲ್ಲೆಗಳಲ್ಲಿ ಪ್ರತಿವರ್ಷ 20 ಶಾಲೆಗಳಲ್ಲಿ ಗ್ರಾಹಕರ ಕ್ಲಬ್ಗಳನ್ನು ರಚಿಸುತ್ತಿದ್ದೇವೆ. ಐದು ವರ್ಷಗಳಲ್ಲಿ ಎಲ್ಲಾ ಪ್ರೌಢಶಾಲೆಗಳಲ್ಲೂ ಕ್ಲಬ್ ಸ್ಥಾಪಿಸುತ್ತೇವೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.