ಬೆಂಗಳೂರು: ರಾಜ್ಯ ಸರ್ಕಾರದ ಸಚಿವರು, ಕಾಂಗ್ರೆಸ್ ನಾಯಕರ ಟೆಲಿಫೋನ್ ಸಂಭಾಷಣೆಗಳನ್ನು ಕೇಂದ್ರ ಸರ್ಕಾರ ಕದ್ದಾಲಿಸುತ್ತಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಆಪಾದಿಸಿದರು.
‘ಟೆಲಿಫೋನ್ ಸಂಭಾಷಣೆಗಳನ್ನು ಕದ್ದಾಲಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಅನೇಕ ದಿನಗಳಿಂದ ಇದು ನಡೆಯುತ್ತಿದೆ’ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಹೇಳಿದರು. ಚುನಾವಣಾ ವರ್ಷವಾಗಿರುವುದರಿಂದ ಕೇಂದ್ರ ಇಂತಹ ಕೆಲಸ ಮಾಡುತ್ತಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವರಿಗೆ ದೂರು ನೀಡಲಾಗುವುದು ಎಂದರು.
ಷಾ ಈಸ್ಟ್ ಇಂಡಿಯಾ ಕಂಪನಿ ಇದ್ದಂತೆ :
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಈಸ್ಟ್ ಇಂಡಿಯಾ ಕಂಪನಿಯಿದ್ದಂತೆ ಎಂದು ರೆಡ್ಡಿ ವ್ಯಂಗ್ಯವಾಡಿದರು.
‘ನಾನು ವ್ಯಾಪಾರ ಮಾಡುವುದಕ್ಕೆ ಬಂದಿರುವುದು ಎಂದು ಷಾ ಹೇಳಿದ್ದಾರೆ. ಹಣ ಕೊಟ್ಟು ರಾಜ್ಯದ ಜನರ ಮತ ಖರೀದಿಸುತ್ತೇವೆ ಎಂಬುದು ಅವರ ಕನಸು. ಅದು ರಾಜ್ಯದಲ್ಲಿ ನಡೆಯುವುದಿಲ್ಲ’ ಎಂದು ಹೇಳಿದರು.
‘ಆರ್ಎಸ್ಎಸ್ನವರು ಉಗ್ರಗಾಮಿಗಳು ಎಂದು ಹೇಳಿದ ಮುಖ್ಯಮಂತ್ರಿ ಜನರ ಕ್ಷಮೆ ಕೇಳಬೇಕು’ ಎಂಬ ಶೋಭಾ ಕರಂದ್ಲಾಜೆ ಹೇಳಿಕೆಗೆ ಪ್ರತಿಕ್ರಿಯಿಸಿದ ರೆಡ್ಡಿ, ಇದ್ದಿದ್ದು ಇದ್ದಂಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ರಂತೆ ಎಂಬ ಹಾಗೆ ಶೋಭಾ ವರ್ತಿಸುತ್ತಿದ್ದಾರೆ ಎಂದು ಕುಟುಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.