ಚಿಕ್ಕಬಳ್ಳಾಪುರ: ಬಾಗೇಪಲ್ಲಿಯಲ್ಲಿ ಶುಕ್ರವಾರ ‘ಪರಿವರ್ತನಾ ಯಾತ್ರೆ’ಯ ಸಾರ್ವಜನಿಕ ಕಾರ್ಯಕ್ರಮಕ್ಕಾಗಿ ಸಿದ್ಧಪಡಿಸಿದ ವೇದಿಕೆಯಲ್ಲಿ ಬಿಜೆಪಿ ಮುಖಂಡ ಅರಿಕೆರೆ ಸಿ.ಕೃಷ್ಣಾರೆಡ್ಡಿ ಅವರು ಆರ್ಕೆಸ್ಟ್ರಾದೊಂದಿಗೆ ಯುವತಿಯರ ನೃತ್ಯ ಆಯೋಜಿಸಿದ್ದು ತೀವ್ರ ಚರ್ಚೆಗೆ ಗ್ರಾಸವಾಯಿತು.
ಪಟ್ಟಣದ ಎಚ್.ಎನ್.ವೃತ್ತದಲ್ಲಿ ಹಾಕಿದ ವೇದಿಕೆಯಲ್ಲಿ ಬೆಳಿಗ್ಗೆ 10.30ರ ಸುಮಾರಿಗೆ ಆರಂಭಗೊಂಡ ಆರ್ಕೆಸ್ಟ್ರಾ ಕಾರ್ಯಕ್ರಮ ಗೌರಿಬಿದನೂರಿನಿಂದ ಯಾತ್ರೆ ಪಟ್ಟಣಕ್ಕೆ ಬರುವವರೆಗೂ ನಡೆಯಿತು. ಸುಮಾರು ನಾಲ್ಕು ತಾಸು ನಡೆದ ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಮೂವರು ಯುವತಿಯರು ಬಗೆಬಗೆಯ ಹಾಡಿಗೆ ಮೈಬಳುಕಿಸಿ ಹೆಜ್ಜೆ ಹಾಕುತ್ತ ವೇದಿಕೆ ಮೇಲೆ ನೃತ್ಯ ಮಾಡಿದರು.
ಕೆಲವು ಕಾರ್ಯಕರ್ತರು ಯುವತಿಯರಿಗೆ ಸಾಥ್ ನೀಡಿ ಹೆಜ್ಜೆ ಹಾಕುತ್ತಿದ್ದರು. ‘ಅಲ್ಲಾಡ್ಸು ಅಲ್ಲಾಡ್ಸು’ ಎನ್ನುವಂತಹ ಹಾಡುಗಳಿಗೆ ವೇದಿಕೆ ಮೇಲಿದ್ದವರೆಲ್ಲ ಮಾದಕ ನೃತ್ಯ ಮಾಡಿದರು. ಯುವತಿಯರೊಂದಿಗೆ ಹಿರಿಯರೊಬ್ಬರು ಹೆಜ್ಜೆ ಹಾಕಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪೂರ್ವ ನಿಗದಿಯಂತೆ ಬಾಗೇಪಲ್ಲಿಯಲ್ಲಿ ಮಧ್ಯಾಹ್ನ 1 ಗಂಟೆಗೆ ಯಾತ್ರೆ ನಡೆಯಬೇಕಿತ್ತು. ಆದರೆ ಮಧ್ಯಾಹ್ನ 3ರ ನಂತರ ಆರಂಭವಾಯಿತು. ಅಲ್ಲಿಯವರೆಗೂ ಆರ್ಕೆಸ್ಟ್ರಾ, ನೃತ್ಯ ಮುಂದುವರಿದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.