ADVERTISEMENT

ಕನ್ನಡ ಹಾಡು ಹಾಡಿದ ‘ಮಹಾ’ ಸಚಿವರ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2018, 19:30 IST
Last Updated 23 ಜನವರಿ 2018, 19:30 IST

ಬೆಳಗಾವಿ: ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು...’ ಚಿತ್ರಗೀತೆ ಹಾಡಿದ್ದ ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಅವರ ಕೊಲ್ಹಾಪುರ ನಿವಾಸದ ಎದುರು ಬೆಳಗಾವಿಯ ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್‌) ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಸಚಿವರ ವರ್ತನೆಯಿಂದ ಗಡಿ ಪ್ರದೇಶದಲ್ಲಿ ವಾಸಿಸುತ್ತಿರುವ ಮರಾಠಿಗರ ಮನಸ್ಸಿಗೆ ನೋವುಂಟಾಗಿದ್ದು, ತಕ್ಷಣ ಗಡಿ ಉಸ್ತುವಾರಿ ಸಚಿವ ಸ್ಥಾನಕ್ಕೆ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

50 ಮಂದಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬೆಳಗಾವಿ ಪಾಲಿಕೆ ಸದಸ್ಯೆ ಸರಿತಾ ಪಾಟೀಲ, ರೇಣು ಕಿಲ್ಲೇಕರ, ಸುನೀಲ ಬಾಳೇಕುಂದ್ರಿ, ಮದನ್‌ ಬಾಮನೆ ಹಾಗೂ ಇತರರು ಪಾಟೀಲ ವಿರುದ್ಧ ಘೋಷಣೆಗಳನ್ನು ಕೂಗಿದರು. ಪಾಟೀಲ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದಾಗ ಸ್ಥಳೀಯ ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು.

ADVERTISEMENT

ಕಾಳಜಿ ಇಲ್ಲ: ಕೊಲ್ಹಾಪುರಕ್ಕೆ ತೆರಳುವ ಮುಂಚೆ ಬೆಳಗಾವಿಯ ಶಿವಾಜಿ ಉದ್ಯಾನದಲ್ಲಿ ಮಾತನಾಡಿದ ಎಂಇಎಸ್‌ ಯುವಮಂಚ್‌ ಕಾರ್ಯಕರ್ತರು, ಮುಂದಿನ ಚುನಾವಣೆಯಲ್ಲಿ ಪಾಟೀಲರಿಗೆ ತಕ್ಕ ಪಾಠ ಕಲಿಸಲು ಎಲ್ಲ ಮರಾಠಿಗರೂ ಒಂದಾಗಬೇಕು ಎಂದರು.

ಗೋಕಾಕ ತಾಲ್ಲೂಕಿನ ತವಗ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಪಾಟೀಲ ಅವರು, ಗಡಿ ಹಾಗೂ ಭಾಷಾ ವೈಷಮ್ಯ ಮರೆತು ಸಾಮರಸ್ಯದಿಂದ ಬದುಕಬೇಕು ಎಂದು ಭಾಷಣ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.