ಬೆಂಗಳೂರು: ಮಲೇಷ್ಯಾದಿಂದ ಮರಳು ಆಮದು ಮಾಡಿಕೊಳ್ಳುವಲ್ಲಿ ₹5,580 ಕೋಟಿ ಅವ್ಯವಹಾರ ನಡೆದಿದೆ ಎಂಬ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಆರೋಪ ಸತ್ಯಕ್ಕೆ ದೂರವಾದುದು ಎಂದು ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (ಎಂಎಸ್ಐಎಲ್) ಅಧ್ಯಕ್ಷ ಹಂಪನಗೌಡ ಬಾದರ್ಲಿ ಸ್ಪಷ್ಟಪಡಿಸಿದ್ದಾರೆ.
ಮಲೇಷ್ಯಾದಿಂದ ಈವರೆಗೆ ₹37 ಲಕ್ಷ ಮೊತ್ತದ 935 ಟನ್ ಮರಳು ತರಿಸಲಾಗಿದ್ದು, ಮಾರಾಟ ಪ್ರಕ್ರಿಯೆ ನಡೆಯುತ್ತಿದೆ. ಜನರ ಬೇಡಿಕೆ ಆಧರಿಸಿ ಮುಂದೆ ಮರಳು ತರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
5 ವರ್ಷ ನಿರಂತರ ಬೇಡಿಕೆ ಬಂದು 180 ಲಕ್ಷ ಟನ್ ಮರಳು ಆಮದು ಮಾಡಿಕೊಂಡರೆ ಒಟ್ಟು ₹ 7,000 ಕೋಟಿ ವ್ಯವಹಾರ ನಡೆಯಲಿದೆ. ಇದು ವ್ಯವಹಾರ ಆಗುತ್ತದೆಯೇ ವಿನಾ ಅವ್ಯವಹಾರ ಆಗುವುದಿಲ್ಲ ಎಂದು ಹೇಳಿದ್ದಾರೆ.
‘ಇ’ ಪೋರ್ಟಲ್ ಮೂಲಕ 2017ರ ಮೇ 25ರಂದು ಟೆಂಡರ್ ಕರೆಯಲಾಗಿತ್ತು. ಜುಲೈ 12ರಂದು ಟೆಂಡರ್ ತೆರೆದಿದ್ದು, ಎರಡು ಕಂಪನಿಗಳು ಅರ್ಜಿ ಸಲ್ಲಿಸಿದ್ದವು. ಯಾವುದೇ ದಾಖಲೆ ಹಾಕದಿರುವ ಫಿಝಾ ಡೆವೆಲಪರ್ಸ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಪ್ರೈವೆಟ್ ಲಿ. ಅರ್ಜಿ ತಿರಸ್ಕರಿಸಿ, ಪೋಸಿಡೆನ್ ಕಂಪನಿ ಅರ್ಜಿಯನ್ನು ಅಂಗೀಕರಿಸಲಾಯಿತು ಎಂದು ವ್ಯವಸ್ಥಾಪಕ ನಿರ್ದೇಶಕ ಜೆ.ಸಿ. ಪ್ರಕಾಶ್ ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.