ಬಳ್ಳಾರಿ: ‘ರಾಮ- ಸೀತೆ ಕೂಡಾ ಗೋಮಾಂಸ ತಿನ್ನುತ್ತಿದ್ದರು ಎಂದು ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖವಾಗಿದೆ. ಯಜ್ಞ-ಯಾಗಾದಿಗಳ ಸಂದರ್ಭದಲ್ಲೂ ಗೋಮಾಂಸ ಸೇವನೆ ನಡೆಯುತ್ತಿತ್ತು. ಇದನ್ನು ಮರೆತಿರುವ ಆರ್ಎಸ್ಎಸ್ –ಬಿಜೆಪಿ, ಸಾಂಸ್ಕೃತಿಕ ಸರ್ವಾಧಿಕಾರ ನಡೆಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ದೊಡ್ಡ ಅಪಾಯ’ ಎಂದು ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅಭಿಪ್ರಾಯಪಟ್ಟರು.
‘ಸೌಹಾರ್ದತೆಗಾಗಿ ಕರ್ನಾಟಕ’ ಸಮಿತಿಯು ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಪೂರ್ವಸಿದ್ಧತಾ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ‘ಆಗ ಗೋಮಾಂಸ ತಿನ್ನುತ್ತಿದ್ದವರು ಮಾತ್ರ ಪೂಜ್ಯರು. ಈಗಿನವರು ಅಲ್ಲ ಎಂದರೆ ಹೇಗೆ’ ಎಂದು ಪ್ರಶ್ನಿಸಿದರು.
‘ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮುಕ್ತ ಭಾರತ ಮಾಡುವುದಾಗಿ ಹೇಳಿದ್ದಾರೆ. ನಂತರದಲ್ಲಿ ಮುಸ್ಲಿಂ, ಕ್ರೈಸ್ತ, ಲಿಂಗಾಯತ ಹಾಗೂ ಜೈನ ಮುಕ್ತ ಭಾರತ ಎನ್ನುತ್ತಾರೆ. ಒಟ್ಟಾರೆ ಅವರ ಉದ್ದೇಶವೇನು? ಇಡೀ ಭಾರತದಲ್ಲಿ ಅವರು ಮಾತ್ರ ಉಳಿಯಬೇಕು. ಉಳಿದವರೆಲ್ಲ ಅಳಿಯಬೇಕು ಎಂಬ ಧೋರಣೆಯಲ್ಲವೇ? ಇದು ಯಾವ ಅಭಿವೃದ್ಧಿಯ ದ್ಯೋತಕ’ ಎಂದು ಪ್ರಶ್ನಿಸಿದರು.
‘ಹಿಂದೂಗಳು ನಾವು ಒಂದು, ನಾವೆಲ್ಲ ಬಂಧು ಎಂದು ಆರ್ಎಸ್ಎಸ್ ಸೇರಿದಂತೆ ಸಂಘ ಪರಿವಾರದವರು ಹೇಳುತ್ತಿದ್ದಾರೆ. ಆದರೆ, ಅಸ್ಪೃಶ್ಯ ಸಮುದಾಯಗಳನ್ನು ಪ್ರಾಣಿಗಳಿಗಿಂತಲೂ ಕಡೆಯಾಗಿ ನೋಡಿಕೊಂಡಿದ್ದು ಇದೇ ಹಿಂದೂಗಳು ಎಂದು ಹೇಳಿಕೊಳ್ಳುವವರೇ ಹೊರತು, ಬೇರೆಯವರಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.