ADVERTISEMENT

ಮೃತ ಮಗನ ನೇತ್ರದಾನ ಮಾಡಿದ ಪಾಲಕರು

​ಪ್ರಜಾವಾಣಿ ವಾರ್ತೆ
Published 28 ಜನವರಿ 2018, 19:30 IST
Last Updated 28 ಜನವರಿ 2018, 19:30 IST
ಮಹೇಂದ್ರ
ಮಹೇಂದ್ರ   

ರಾಯಚೂರು: ತಾಲ್ಲೂಕಿನ ಕುಕನೂರಿನಿಂದ ರಾಯಚೂರಿಗೆ ಭಾನುವಾರ ತರಕಾರಿ ಮಾರಾಟಕ್ಕೆ ಬರುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟ ಬೈಕ್ ಸವಾರ ಮಹೇಂದ್ರ (18) ಅವರ ಪಾಲಕರು ಆತನ ನೇತ್ರಗಳನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

ನಗರ ಹೊರವಲಯದ ಯರಮರಸ್ ಡಯಟ್ ಸಮೀಪ ಅಪಘಾತ ನಡೆದಿದೆ. ಕುಕನೂರಿನಲ್ಲಿ ಚಿಕ್ಕ ಹೋಟೆಲ್ ಇಟ್ಟುಕೊಂಡಿರುವ ಮಲ್ಲಿಕಾರ್ಜುನ ಹಾಗೂ ಹೊಲ-ಮನೆ ಕೆಲಸ ಮಾಡುವ ನರಸಮ್ಮ ದಂಪತಿ ಮಗನಾದ ಮಹೇಂದ್ರ ಪಿಯುಸಿ ಓದುತ್ತಿದ್ದ. ಓದಿನೊಂದಿಗೆ ಪ್ರತಿದಿನವೂ ತಮ್ಮ ಜಮೀನಿನಲ್ಲಿ ಬೆಳೆಯುವ ತರಕಾರಿಯನ್ನು ರಾಯಚೂರಿನ ತರಕಾರಿ ಮಾರಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ.

ಪಾಲಕರ ಇಂಗಿತದಂತೆ ರಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಕೇಂದ್ರಕ್ಕೆ ಬಂದ ನವೋದಯ ವೈದ್ಯಕೀಯ ಕಾಲೇಜಿನ ವೈದ್ಯ ಸಿಬ್ಬಂದಿ ನೇತ್ರದಾನಕ್ಕೆ ಒಪ್ಪಿಗೆ ಪತ್ರ ಪಡೆದರು. ಆ ನಂತರ ನೇತ್ರಗಳನ್ನು ತೆಗೆದುಕೊಂಡರು. ರಾಯಚೂರು ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡರು.

ADVERTISEMENT

‘ಸಕಾಲಕ್ಕೆ ಮಾಹಿತಿ ನೀಡಿದ್ದರಿಂದ ನೇತ್ರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಿದೆ. ಬೆಂಗಳೂರಿನ ನೇತ್ರ ಸಂಗ್ರಹಾಲಯಕ್ಕೆ ಕಳುಹಿಸಲಾಗುವುದು’ ಎಂದು ನವೋದಯ ಆಸ್ಪತ್ರೆಯ ಸಿಬ್ಬಂದಿ ತಿಳಿಸಿದರು.

‘ಮಗನಂತೂ ಉಳಿಯಲಿಲ್ಲ. ಕನಿಷ್ಠ ಆತನ ಕಣ್ಣುಗಳಾದರೂ ಬೇರೆಯವರ ಬಾಳಿಗೆ ಬೆಳಕಾಗಲಿ ಎಂದು ಈ ನಿರ್ಧಾರ ತೆಗೆದುಕೊಂಡಿದ್ದೇವೆ’ ಎಂದು ಕುಟುಂಬದ ಸದಸ್ಯರು ತಿಳಿಸಿದರು.

ನೇತ್ರದಾನ ಮಾಡಿ ಔದಾರ್ಯ ಮೆರೆದ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮಗನ ಸಾವಿನಲ್ಲೂ ಆದರ್ಶ ಮೆರೆದ ಪಾಲಕರ ನಿರ್ಧಾರವು ಸಮಾಜಕ್ಕೆ ಮಾದರಿಯಾಗಿದೆ ಎಂದು ಸ್ಥಳೀಯರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.