ಬೆಂಗಳೂರು: 'ಫ್ಯಾಸಿಸ್ಟ್ ಶಕ್ತಿಗಳು ಹೆಚ್ಚು ಕಾಲ ಉಳಿಯುವುದಿಲ್ಲ' ಎಂದು ನಟ ಪ್ರಕಾಶ್ ರೈ ಹೇಳಿದರು.
ಗೌರಿ ಸ್ಮಾರಕ ಟ್ರಸ್ಟ್ ನಗರದ ಪುರಭವನದಲ್ಲಿ ಸೋಮವಾರ ಆಯೋಜಿಸಿದ್ದ ಗೌರಿ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ದುರುಳರು ಧ್ವನಿ ಎತ್ತುವವರನ್ನು ಒಂಟಿಯಾಗಿಸಿ ಕೊಲ್ಲುತ್ತಿದ್ದಾರೆ. ನಾವು ಗೌರಿಯನ್ನು ಸಮಾಧಿ ಮಾಡಿಲ್ಲ, ಬದಲಿಗೆ ಬಿತ್ತಿದ್ದೇವೆ. ಅವಳ ವಿಚಾರಗಳು ಹೆಮ್ಮರವಾಗಲಿವೆ' ಎಂದು ಹೇಳಿದರು.
'ವೆಮುಲಾರ ಮರಣ ಕನ್ಹಯ್ಯ ಕುಮಾರ್, ಶೆಹ್ಲಾ ರಸೀದ್ ರನ್ನು, ದಲಿತರ ಕೊಲೆಗಳು ಜಿಗ್ನೇಶ್ ಮೇವಾನಿಯನ್ನು ಮತ್ತು ಗೌರಿಯ ಹತ್ಯೆ ನಾನು, ನನ್ನಂತವರು ಗಟ್ಟಿಯಾಗಿ ಮಾತನಾಡುವಂತೆ ಮಾಡಿದೆ' ಎಂದರು.
'ಈಗಿನ ಫ್ಯಾಸಿಸ್ಟ್ ಮತ್ತೈದು ವರ್ಷ ಅಧಿಕಾರಕ್ಕೆ ಬರಲ್ಲ. ಆದರೆ ಅದು 20 ವರ್ಷಗಳ ಕಾಲ ಅಳಿಸಲಾಗದಷ್ಟು ಗಾಯ ಮಾಡಲಿದೆ. ಅದನ್ನು ಗುಣಪಡಿಸಲು ನಾವು ಬೀದಿಗಿಳಿದು ಧ್ವನಿ ಎತ್ತೋಣ' ಎಂದು ಕರೆ ನೀಡಿದರು.
ಗೌರಿ ಸ್ಮಾರಕ ಟ್ರಸ್ಟ್ ನ ಅಧ್ಯಕ್ಷ ಮತ್ತು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ನಕ್ಸಲರನ್ನು ಮುಖ್ಯ ವಾಹಿನಿಗೆ ತರಲು ಶ್ರಮಿಸಿದ ಗೌರಿ ಲೇಖನಿಯನ್ನು ಖಡ್ಗದಂತೆ ಬಳಸಿದಳು' ಎಂದರು.
'ಗೌರಿ ಹತ್ಯೆಗೆ ಸಂಬಂಧಿಸಿದಂತೆ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಯ ಮೇಲೆ ಒಂದು ಕಣ್ಣಿಡಬೇಕು. ಹಂತಕರನ್ನು ಆದಷ್ಟು ಬೇಗ ಪತ್ತೆ ಹಚ್ಚಿ ಶಿಕ್ಷಿಸಬೇಕು' ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.