ADVERTISEMENT

ಕಾಂಗ್ರೆಸ್‌ಗೆ ಸೇರ್ಪಡೆಯಾಗುವುದಾಗಿ ಎಂ.ಸಿ.ನಾಣಯ್ಯ ಬೆಂಬಲಿಗರ ಸಭೆಯಲ್ಲಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2018, 16:44 IST
Last Updated 29 ಜನವರಿ 2018, 16:44 IST
ಕಾಂಗ್ರೆಸ್‌ಗೆ ಸೇರ್ಪಡೆಯಾಗುವುದಾಗಿ ಎಂ.ಸಿ.ನಾಣಯ್ಯ ಬೆಂಬಲಿಗರ ಸಭೆಯಲ್ಲಿ ಘೋಷಣೆ
ಕಾಂಗ್ರೆಸ್‌ಗೆ ಸೇರ್ಪಡೆಯಾಗುವುದಾಗಿ ಎಂ.ಸಿ.ನಾಣಯ್ಯ ಬೆಂಬಲಿಗರ ಸಭೆಯಲ್ಲಿ ಘೋಷಣೆ   

ಮಡಿಕೇರಿ: ಮಾಜಿ ಸಚಿವ, ಜೆಡಿಎಸ್‌ ಹಿರಿಯ ಮುಖಂಡ ಎಂ.ಸಿ. ನಾಣಯ್ಯ ಅವರು ಶೀಘ್ರವೇ ಕಾಂಗ್ರೆಸ್‌ ಸೇರುವುದಾಗಿ ಸೋಮವಾರ ರಾತ್ರಿ ನಡೆದ ಬೆಂಬಲಿಗರ ಸಭೆಯಲ್ಲಿ ಘೋಷಿಸಿದರು.

ಇಲ್ಲಿನ ಸಭಾಂಗಣವೊಂದರಲ್ಲಿ ನಡೆದ ಸಭೆಯಲ್ಲಿ ಬೆಂಬಲಿಗರ ಅಭಿಪ್ರಾಯ ಪಡೆದ ಬಳಿಕ ಕಾಂಗ್ರೆಸ್‌ ಸೇರುವ ನಿರ್ಧಾರ ಪ್ರಕಟಿಸಿದರು.
ಇಷ್ಟು ದಿವಸ ಅವರ ಪಕ್ಷ ಸೇರ್ಪಡೆ ವಿಚಾರವು ಹಲವು ವದಂತಿಗಳಿಗೆ ಕಾರಣವಾಗಿತ್ತು. ಬೆಂಬಲಿಗರೂ ನಾಲ್ಕು ಸಭೆ ನಡೆಸಿ ಕಾಂಗ್ರೆಸ್‌ ಸೇರುವಂತೆಯೇ ಕೋರಿಕೊಂಡಿದ್ದರು.

ಈ ಬೆಳವಣಿಗೆಯ ಮಧ್ಯೆ ಕೊಡಗು ಜಿಲ್ಲೆಯ ಪ್ರವಾಸದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖುದ್ದು ಅವರ ನಿವಾಸಕ್ಕೆ ಭೇಟಿ ನೀಡಿ ಪಕ್ಷಕ್ಕೆ ಸೆಳೆಯುವ ಪ್ರಯತ್ನವನ್ನೂ ನಡೆಸಿದ್ದರು.

ADVERTISEMENT

ಜನತಾದಳದ ಆಡಳಿತಾವಧಿಯಲ್ಲಿ ಸಿದ್ದರಾಮಯ್ಯ ಹಾಗೂ ನಾಣಯ್ಯ ಒಟ್ಟಿಗೆ ಸಂಪುಟದಲ್ಲಿ ಕೆಲಸ ಮಾಡಿದ್ದವರು. ಅವರು ಪಕ್ಷಕ್ಕೆ ಬಂದರೆ ಕೊಡಗಿನಲ್ಲಿ ಶಕ್ತಿ ಬರಲಿದೆ ಎಂದು ಜಿಲ್ಲಾ ಮುಖಂಡರನ್ನು ಮುಖ್ಯಮಂತ್ರಿಯೇ ಒಪ್ಪಿಸುವ ಪ್ರಯತ್ನ ಮಾಡಿದ್ದರು. ಈಚೆಗೆ ಬೆಂಗಳೂರಿಗೆ ನಾಣಯ್ಯ ಅವರನ್ನು ಕರೆಸಿಕೊಂಡಿದ್ದ ಕಾಂಗ್ರೆಸ್‌ ವರಿಷ್ಠರು ಮಾತುಕತೆ ನಡೆಸಿದ್ದರು ಎನ್ನಲಾಗಿದೆ. 

ಜೆಡಿಎಸ್‌ ಮುಖಂಡರ ವಿರುದ್ಧ ಮುನಿಸು: ಕಳೆದ ಒಂದು ವರ್ಷದಿಂದ ನಾಣಯ್ಯ ಅವರು ಜೆಡಿಎಸ್‌ನಲ್ಲಿ ಸಕ್ರಿಯವಾಗಿರಲಿಲ್ಲ. ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂಬ ಅಸಮಾಧಾನ ಅವರಲ್ಲಿತ್ತು. ಜೆಡಿಎಸ್‌ನಿಂದ ಮಡಿಕೇರಿ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ, ಮಾಜಿ ಸಚಿವ ಬಿ.ಎ. ಜೀವಿಜಯ ಹಾಗೂ ಇವರ ನಡುವೆ ವೈಮನಸ್ಸು ಉಂಟಾಗಿತ್ತು.

ನಾಣಯ್ಯ ವಿರುದ್ಧ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿಗೆ ಜೀವಿಜಯ ದೂರು ನೀಡಿದ್ದರು. ಇದರಿಂದ ಮತ್ತಷ್ಟು ಮೈನಸ್ಸು ಹೆಚ್ಚಾಗಿತ್ತು ಎಂದು ಅವರ ಆಪ್ತರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.