ADVERTISEMENT

ನಾಳೆ ನಗರಕ್ಕೆ ಮುಖ್ಯ ಚುನಾವಣಾ ಆಯುಕ್ತರು

ಆಯೋಗದ ತಂಡದಿಂದ 2 ದಿನಗಳ ಸಭೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2018, 19:30 IST
Last Updated 29 ಜನವರಿ 2018, 19:30 IST
ರಾವತ್‌
ರಾವತ್‌   

ಬೆಂಗಳೂರು: ವಿಧಾನಸಭಾ ಚುನಾವಣಾ ಸಿದ್ಧತೆ ಪರಿಶೀಲನೆ ನಡೆಸಲು ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್‌ ರಾವತ್‌, ಚುನಾವಣಾ ಆಯುಕ್ತರಾದ ಸುನಿಲ್‌ ಅರೋರಾ, ಅಶೋಕ್‌ ಲಾವಸ್‌ ಮತ್ತು ಆಯೋಗದ ಇತರ ಸದಸ್ಯರ ತಂಡ ಇದೇ 31 ರಂದು ನಗರಕ್ಕೆ ಬರಲಿದೆ.

ಎರಡು ದಿನ ನಗರದಲ್ಲಿ ರಾಜ್ಯದ ಸರ್ಕಾರದ ಹಿರಿಯ ಅಧಿಕಾರಿಗಳು, ವಿವಿಧ ಪಕ್ಷಗಳ ಮುಖಂಡರ ಜತೆ ಸಭೆ ನಡೆಸಿ ಅಭಿಪ್ರಾಯ ಪಡೆಯಲಿದ್ದಾರೆ.

ಕಾನೂನು– ಸುವ್ಯವಸ್ಥೆ, ಮತದಾರರ ಪಟ್ಟಿ ಪರಿಷ್ಕರಣೆ, ಚುನಾವಣೆ ನಡೆಸುವ ದಿನಾಂಕ, ಭದ್ರತಾ ವ್ಯವಸ್ಥೆ, ಚುನಾವಣೆಗೆ ಸಿಬ್ಬಂದಿ ತರಬೇತಿ, ವಿದ್ಯುನ್ಮಾನ ಮತ ಯಂತ್ರಗಳ ಬಳಕೆ ಕುರಿತು ಚರ್ಚೆ ನಡೆಯಲಿದೆ. ಈ ಸಭೆಯಲ್ಲೇ ಚುನಾವಣೆ ಯಾವಾಗ ನಡೆಸಬೇಕು ಎಂಬ ತೀರ್ಮಾನಕ್ಕೆ ಬರುವ ಸಾಧ್ಯತೆ ಇದೆ. ಬಳಿಕ ದೆಹಲಿಯಲ್ಲಿ ದಿನಾಂಕ ಪ್ರಕಟಿಸುವರು ಎಂದು ಮೂಲಗಳು ತಿಳಿಸಿವೆ.

ADVERTISEMENT

ರಾಜ್ಯದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಜಿಲ್ಲಾ ಚುನಾವಣಾ ಅಧಿಕಾರಿಗಳು ಮತ್ತು ಹಿರಿಯ ಪೊಲೀಸ್‌ ಅಧಿಕಾರಿಗಳ ಜತ ಚರ್ಚೆ ನಡೆಸುವರು. ಮತದಾರರ ಪಟ್ಟಿಯಲ್ಲಿರುವ ಸಮಸ್ಯೆಗಳು, ಮತಗಟ್ಟೆಗಳು, ಮತದಾರರಿಗೆ ಅರಿವು ಮೂಡಿಸುವುದರ ಬಗ್ಗೆಯೂ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ.

ಚುನಾವಣೆಯಲ್ಲಿ ವಿವಿಪ್ಯಾಟ್‌ ಒಳಗೊಂಡ ಇವಿಎಂಗಳನ್ನು ಬಳಸಲು ಉದ್ದೇಶಿಸಿರುವುದರಿಂದ ಆ ಬಗ್ಗೆ ಮತದಾರರಲ್ಲಿ ಅರಿವು ಮೂಡಿಸಲು ಸಂಚಾರಿ ಪ್ರಾತ್ಯಕ್ಷಿಕೆ ವಾಹನಗಳನ್ನು ರಾಜ್ಯದಲ್ಲಿ ಬಳಸುವ ಸಾಧ್ಯತೆ ಬಗ್ಗೆ ಚರ್ಚೆ ನಡೆಯಲಿದೆ.

ಆಯೋಗ ಪೂರ್ಣ ಪ್ರಮಾಣದಲ್ಲಿ ರಾಜ್ಯಕ್ಕೆ ಬರುವ ಸಂಬಂಧ ಭಾನುವಾರ ರಾತ್ರಿ ಮುಖ್ಯ ಚುನಾವಣಾಧಿ
ಕಾರಿ ಸಂಜೀವ್‌ ಕುಮಾರ್‌ ಅವರಿಗೆ ಸಂದೇಶ ಬಂದಿತು. ಪೂರ್ಣ ಪ್ರಮಾಣದ ತಂಡ ಬರುವ ಯಾವುದೇ ಸೂಚನೆ ಇರಲಿಲ್ಲ ಎಂದು ಮೂಲಗಳು ಹೇಳಿವೆ.

ಅಧಿಕಾರಿಗಳ ಸಭೆ ವಿಧಾನಸೌಧ ಅಥವಾ ವಿಕಾಸಸೌಧದಲ್ಲಿ ನಡೆಯಲಿದೆ. ಸಭೆ ಅಂತಿಮಗೊಂಡ ಬಳಿಕ ಫೆಬ್ರುವರಿ 1 ಅಥವಾ ಫೆಬ್ರವರಿ 2 ರಂದು ಮಾಧ್ಯಮಗೋಷ್ಠಿ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.