ADVERTISEMENT

ಮಹದಾಯಿ: ಜಟಿಲಗೊಳಿಸಲು ಗೋವಾ ನಾಯಕರ ಯತ್ನ

​ಪ್ರಜಾವಾಣಿ ವಾರ್ತೆ
Published 29 ಜನವರಿ 2018, 19:30 IST
Last Updated 29 ಜನವರಿ 2018, 19:30 IST

ಹುಬ್ಬಳ್ಳಿ: ಗೋವಾದ ರಾಜಕೀಯ ನಾಯಕರು ಪದೇ ಪದೇ ಕಣಕುಂಬಿಗೆ ಭೇಟಿ ನೀಡಿ, ವಿವಾದವನ್ನು ಮತ್ತಷ್ಟು ಜಟಿಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮಲಪ್ರಭಾ ಮಹದಾಯಿ ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ಅಧ್ಯಕ್ಷ ಲೋಕನಾಥ ಹೆಬಸೂರ ಆರೋಪಿಸಿದರು.

‘ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿ ಸಂಧಾನಕ್ಕೆ ಮುಂದಾದರೂ, ಅಲ್ಲಿ ಕರ್ನಾಟಕವನ್ನು ಇಕ್ಕಟ್ಟಿಗೆ ಸಿಲುಕಿಸಲು ಈಗಲೇ ತಂತ್ರ ರೂಪಿಸುತ್ತಿದ್ದಾರೆ. ಈ ಮೂಲಕ ನ್ಯಾಯಮಂಡಳಿ ತೀರ್ಪು ವಿಳಂಬಗೊಳಿಸಲೂ ಯತ್ನಿಸುತ್ತಿದ್ದಾರೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಪ್ರಧಾನಿಗೆ ಮುತ್ತಿಗೆ ಹಾಕುವ ಸಂಬಂಧ ಕಾರ್ಯಕ್ರಮ ರೂಪಿಸಲು, ಬೆಂಗಳೂರಿನಲ್ಲಿ ಜ.31ರಂದು ಸಭೆ ಕರೆಯಲಾಗಿದೆ ಎಂದರು. ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಕರೆ ನೀಡಿರುವ, ಫೆ.4ರ ಬೆಂಗಳೂರು ಬಂದ್‌ಗೆ ಬೆಂಬಲ ನೀಡುವುದಾಗಿ ತಿಳಿಸಿದರು.

ADVERTISEMENT

ಕಣಕುಂಬಿಯಲ್ಲಿ ವಾಸ್ತವ್ಯ: ಗೋವಾ ತಂಡ ಭೇಟಿ ನೀಡಿರುವುದನ್ನು ವಿರೋಧಿಸಿ, ಜೆಡಿಎಸ್ ವತಿಯಿಂದ ಬುಧವಾರ (ಜ.31)  ಕಣಕುಂಬಿಯ ಮಾವಲಿ ದೇವಸ್ಥಾನದ ಎದುರು ವಾಸ್ತವ್ಯ ಮಾಡಲಾಗುವುದು ಎಂದು ಶಾಸಕ ಎನ್‌.ಎಚ್‌. ಕೋನರಡ್ಡಿ ಹೇಳಿದರು.

ಗೋವಾ ನಾಯಕರ ಭೇಟಿ ಬಗ್ಗೆ ಕೇಂದ್ರಕ್ಕೆ ದೂರು ನೀಡಿ, ಅವರು ಪದೇ ಪದೇ ಬಾರದಂತೆ ರಾಜ್ಯ ಬಿಜೆಪಿ ನಾಯಕರು ತಡೆಯಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.