ಹುಬ್ಬಳ್ಳಿ: ‘ಅಲ್ಪರಿಗೆ ಅಧಿಕಾರ ನೀಡಿದರೆ, ಒಳ್ಳೆಯವರನ್ನು ಅವರು ಓಡಿಸುತ್ತಾರೆ ಎಂದು ಯೋಗಿ ವೇಮನ ತಮ್ಮ ವಚನದಲ್ಲಿ ಹೇಳಿದ್ದಾರೆ. ನನ್ನ ವಿಷಯದಲ್ಲಿ ಈ ಮಾತು ಅಕ್ಷರಶಃ ನಿಜವಾಗಿದೆ’ ಎಂದು ಬಿಜೆಪಿ ಮುಖಂಡ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ನಗರದಲ್ಲಿ ಮಂಗಳವಾರ ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಸಂಘದಿಂದ ಆಯೋಜಿಸಿದ್ದ ಯೋಗಿ ವೇಮನ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ‘ಚಪ್ಪಲಿ ತಿನ್ನುವ ಅಭ್ಯಾಸವಿರುವ ನಾಯಿಗೆ ಕಬ್ಬಿನ ರುಚಿಯ ಮಹತ್ವ ಅರಿವಾಗುವುದಿಲ್ಲ’ ಎಂದರು.
‘ಇತ್ತೀಚೆಗೆ ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ನನ್ನ ಬಗ್ಗೆ ಲೇಖನ ಬಂದಿತ್ತು. ಶಿವರಾಜಕುಮಾರ್ ಅಭಿನಯದ ‘ಮಫ್ತಿ’ ಚಿತ್ರ ನನ್ನ ಜೀವನ ಆಧರಿಸಿದೆ ಎಂದು ಬರೆಯಲಾಗಿತ್ತು. ಅಲ್ಲದೆ, ಜನಾರ್ದನ ರೆಡ್ಡಿ ರಾಜಕೀಯ ಅಸ್ಪೃಶ್ಯ ಎಂದೂ ಅದರಲ್ಲಿ ಬರೆದಿದ್ದು ತುಂಬಾ ನೋವಾಗಿತ್ತು' ಎಂದು ಅವರು ಬೇಸರ ವ್ಯಕ್ತಪಡಿಸಿದರು.
‘ನಾನು ಕಷ್ಟದಲ್ಲಿದ್ದಾಗ ನನ್ನ ಜನಾಂಗದ ಪ್ರತಿಯೊಬ್ಬರೂ ನನಗಾಗಿ ಪ್ರಾರ್ಥಿಸಿದ್ದಾರೆ’ ಎಂದರು.
‘ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಬಳ್ಳಾರಿಯ ಕಾರ್ಯಕ್ರಮವೊಂದರಲ್ಲಿ ನನ್ನ ವಿರುದ್ಧ ಮಾತನಾಡಲು ಮುಂದಾದಾಗ ಅಲ್ಲಿನ ಜನ ಎದ್ದು ನಿಂತು, ರೆಡ್ಡಿ ವಿರುದ್ಧ ಮಾತನಾಡಬೇಡಿ. ಅವರ ವಿರುದ್ಧ ಮಾತನಾಡಿದರೆ ನೀವು ಸೋಲುತ್ತೀರಿ ಎಂದರಂತೆ. ಇದಕ್ಕಿಂತ ಭಾಗ್ಯ ಬೇಕೆ?’ ಎಂದು ರೆಡ್ಡಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.