ADVERTISEMENT

‘ಕಳಸಾ– ಬಂಡೂರಿಗೆ ಪ್ರಧಾನಿ ಎನ್‌ಒಸಿ ನೀಡಲಿ’

​ಪ್ರಜಾವಾಣಿ ವಾರ್ತೆ
Published 31 ಜನವರಿ 2018, 19:30 IST
Last Updated 31 ಜನವರಿ 2018, 19:30 IST

ಬೆಂಗಳೂರು: ‘ಕಳಸಾ–ಬಂಡೂರಿ ನಾಲಾ ಕಾಮಗಾರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿರಾಕ್ಷೇಪಣ ಪತ್ರ (ಎನ್‌ಒಸಿ) ನೀಡಬೇಕು’ ಎಂದು ‘ಜನಸಾಮಾನ್ಯರ ಪಕ್ಷ’ ಆಗ್ರಹಿಸಿದೆ.

‘ನವದೆಹಲಿಯಲ್ಲಿ ಜ.22ರಂದು ಪ್ರಧಾನಿ ನರೇಂದ್ರ ಮೋದಿಗೆ ತಮ್ಮ ಪಕ್ಷ ಈ ಕುರಿತು ಮನವಿ ಸಲ್ಲಿಸಿದೆ. ಈ ಮನವಿ ಪರಿಗಣಿಸಿ ಕೂಡಲೇ ನಿರಾಕ್ಷೇಪಣ ಪತ್ರ ನೀಡಬೇಕು. ಇಲ್ಲದೇ ಹೋದರೆ ಮೋದಿ ಫೆ.4ರಂದು ನಗರಕ್ಕೆ ಬರುವ ಅವಶ್ಯಕತೆ ಇಲ್ಲ’ ಎಂದು ಪಕ್ಷದ ಅಧ್ಯಕ್ಷ ಡಾ.ಡಿ. ಅಯ್ಯಪ್ಪ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಕಳಸಾ– ಬಂಡೂರಿ ನಾಲೆಗಳನ್ನು ಉಪಯೋಗಿಸಿಕೊಳ್ಳುವ ಹಕ್ಕು ನಮ್ಮ ರಾಜ್ಯಕ್ಕಿದೆ. ಇದಕ್ಕೆ ಯಾರದೇ ಅನುಮತಿ ಅಗತ್ಯವಿಲ್ಲ. ಹಿಂದಿನ ಸರ್ಕಾರಗಳು ಈ ವಿಷಯವನ್ನು ನ್ಯಾಯಮಂಡಳಿ ಪರಿಧಿಗೆ ಒಯ್ಯುವ ಮೂಲಕ ರಾಜ್ಯದ ಜನರ ಮೂಲಭೂತ ಹಕ್ಕಿಗೆ ಧಕ್ಕೆ ಉಂಟು ಮಾಡಿವೆ’ ಎಂದು ಅವರು ಆರೋಪಿಸಿದರು.

ADVERTISEMENT

‘ಯೋಜನೆಗೆ ಅನುಮತಿ ನೀಡುವಂತೆ ಆಗ್ರಹಿಸಿ ಫೆ.1ರಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು’  ಎಂದು ಅಯ್ಯಪ್ಪ ಹೇಳಿದರು.

ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ ಮಾತನಾಡಿ, ‘ಕಳಸಾ–ಬಂಡೂರಿ ವಿಷಯದಲ್ಲಿ ಪ್ರಧಾನಿ ರಾಜ್ಯದ ಹಿತಾಸಕ್ತಿ ಕಾಪಾಡಬೇಕು. ಉಭಯ ರಾಜ್ಯಗಳ ಜೊತೆ ಚರ್ಚೆ, ಸಂವಾದಗಳ ಮೂಲಕ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.