ಮಡಿಕೇರಿ: ತಾಲ್ಲೂಕಿನ ಮುರ್ನಾಡು ಸಮೀಪದ ಕಿಗ್ಗಾಲು ಗ್ರಾಮದಲ್ಲಿ ಸಹೋದರರ ನಡುವಿನ ಆಸ್ತಿ ವಿವಾದ ವಿಕೋಪಕ್ಕೆ ತಿರುಗಿ ಮೂವರ ಸಾವಿನಲ್ಲಿ ಅಂತ್ಯವಾಗಿದೆ. ಶನಿವಾರ ಬೆಳಿಗ್ಗೆ ಮನೆ ಎದುರಿನ ಕಾಫಿ ತೋಟದ ಸಮೀಪವೇ ಅಣ್ಣ ಹಾಗೂ ಅತ್ತಿಗೆಯ ಮೇಲೆ ತಮ್ಮ ಗುಂಡು ಹಾರಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪಳಂಗಿಯಂಡ ತಮ್ಮಯ್ಯ (50) ಹಾರಿಸಿದ ಗುಂಡಿಗೆ ಅಣ್ಣ ಪಳಂಗಿಯಂಡ ದೇವಯ್ಯ (54), ಅತ್ತಿಗೆ ಪ್ರೇಮಾ (48) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಂತರ, ಅದೇ ಬಂದೂಕಿನಿಂದ ಗುಂಡು ಹೊಡೆದುಕೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ತಮ್ಮಯ್ಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾನೆ.
‘ಆಸ್ತಿ ವಿಚಾರದಲ್ಲಿ ಸಹೋದರರ ನಡುವೆ ಕಲಹವಿತ್ತು. ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದ ಜಾಗದಲ್ಲಿ ಕಾಫಿ ಗಿಡಗಳನ್ನು ನೆಟ್ಟಿದ್ದು ಹಾಗೂ ಕಾಫಿ ಕೊಯ್ಲು ಮಾಡಿದ್ದಕ್ಕೆ ಸಿಟ್ಟಿಗೆದ್ದ ತಮ್ಮ ಗುಂಡು ಹಾರಿಸಿದ್ದಾನೆ. ಈ ಹಿಂದೆಯೂ ಕಾಫಿ ಕೊಯ್ಲು ವಿಚಾರದಲ್ಲಿ ಜಗಳವಾಗಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.