ADVERTISEMENT

ಯೋಗದಿಂದ ದಕ್ಕಿತು ಗೌರವ: ಬಾಬಾ ರಾಮದೇವ್

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2018, 19:30 IST
Last Updated 4 ಫೆಬ್ರುವರಿ 2018, 19:30 IST

ಬಳ್ಳಾರಿ: ‘ನಾನೊಬ್ಬ ಸಾಮಾನ್ಯ ಬಡ ಕುಟುಂಬದಲ್ಲಿ ಜನಿಸಿದವನು. ನನ್ನ ಹುಟ್ಟೂರಿನಲ್ಲಿಯೇ ಜನ ನನಗೆ ಗೌರವ ನೀಡುತ್ತಿರಲಿಲ್ಲ. ಆದರೆ, ಯೋಗ ಕಲಿತ ಬಳಿಕ ನನ್ನ ಊರಷ್ಟೇ ಅಲ್ಲ; ಭಾರತ ಸೇರಿ ಇಡೀ ವಿಶ್ವವೇ ಗೌರವ ನೀಡುತ್ತಿದೆ’ ಎಂದು ಬಾಬಾ ರಾಮದೇವ್‌ ಭಾನುವಾರ ಇಲ್ಲಿ ಹೇಳಿದರು.

ನಗರದಲ್ಲಿ ಆಯೋಜಿಸಿರುವ ಯೋಗ ಶಿಬಿರದಲ್ಲಿ ಮಾತನಾಡಿದ ಅವರು, ‘ವೈಜ್ಞಾನಿಕ ಮತ್ತು ಜಾತ್ಯತೀತ ತತ್ವದಡಿ, ಯೋಗವನ್ನು ಒಂದು ಚಿಕಿತ್ಸೆ ರೂಪದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಇದಕ್ಕೆ ಯಾವುದೇ ಜಾತಿ, ಧರ್ಮ ಅಥವಾ ರಾಜಕೀಯದ ಲೇಪನ ಇಲ್ಲ. ಎಲ್ಲರಿಗೂ ಮುಕ್ತ ಅವಕಾಶವಿದೆ. ಪ್ರತಿಯೊಬ್ಬರೂ ಯೋಗ ಸಂಸ್ಕೃತಿ ರೂಢಿಸಿಕೊಂಡು ಸದೃಢ ಭಾರತ ನಿರ್ಮಿಸಬೇಕು’ ಎಂದು ಸಲಹೆ ನೀಡಿದರು.

ಮುಗಳಖೋಡ ಜಿಡಗಾ ಮುಕ್ತಿಮಂದಿರದ ಪೀಠಾಧಿಪತಿ ಡಾ.ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ‘ಯೋಗಾಭ್ಯಾಸದಿಂದ ರೋಗಗಳನ್ನು ದೂರವಿಡಬಹುದು ಎಂಬುದನ್ನು ರಾಮದೇವ್ ನಿರೂಪಿಸಿದ್ದಾರೆ. ಜತೆಗೆ ಯೋಗದಿಂದ ಸುಸಂಸ್ಕೃತ, ಆರೋಗ್ಯವಂತ, ಸಮಾಜಮುಖಿ ಜನ ಸಮುದಾಯ ನಿರ್ಮಿಸಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.