ಬೆಂಗಳೂರು: ಬಾಬ್ರಿ ಮಸೀದಿ– ರಾಮಜನ್ಮಭೂಮಿ ವಿವಾದವನ್ನು ನ್ಯಾಯಾಲಯದಿಂದ ಹೊರಗೆ ಬಗೆಹರಿಸಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮತ್ತು ಸುನ್ನಿ ವಕ್ಫ್ ಮಂಡಳಿ ಬೆಂಬಲ ವ್ಯಕ್ತಪಡಿಸಿವೆ.
‘ಆರ್ಟ್ ಆಫ್ ಲಿವಿಂಗ್’ನ ಶ್ರೀ ಶ್ರೀ ರವಿಶಂಕರ ಗುರೂಜಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮತ್ತು ಸುನ್ನಿ ವಕ್ಫ್ ಮಂಡಳಿ ಸದಸ್ಯರು ಹಾಗೂ ಮುಸ್ಲಿಂ ಮುಖಂಡರ ಜತೆ ಗುರುವಾರ ನಗರದಲ್ಲಿ ಸಭೆ ನಡೆಸಿದರು.
ನ್ಯಾಯಾಲಯದ ಹೊರಗೆ ವಿವಾದ ಬಗೆಹರಿಸುವ ಶ್ರೀ ಶ್ರೀ ಪ್ರಯತ್ನವನ್ನು ಮುಸ್ಲಿಂ ಮುಖಂಡರು ಬೆಂಬಲಿಸಿದರು. ಮಸೀದಿಯನ್ನು ಜನ್ಮಭೂಮಿಯಿಂದ ಹೊರಗೆ ಸ್ಥಳಾಂತರಿಸುವ ಪ್ರಸ್ತಾವನೆಗೆ ಅನೇಕ ಮುಸ್ಲಿಂ ಸಂಘಟನೆಗಳು ಒಪ್ಪಿವೆ. ಸೌಹಾರ್ದವಾಗಿ ಸಮಸ್ಯೆ ಬಗೆಹರಿಸುವುದಕ್ಕೆ ಒಲವು ತೋರಿವೆ ಎಂದು ಆರ್ಟ್ ಆಫ್ ಲಿವಿಂಗ್ ಪ್ರಕಟಣೆ ತಿಳಿಸಿದೆ.
ಸಭೆಯಲ್ಲಿ ವಿವಿಧ ರಾಜ್ಯಗಳ ಮುಸ್ಲಿಂ ಸಂಘಟನೆಗಳ 16 ನಾಯಕರು ಮತ್ತು ವಿದ್ವಾಂಸರು ಭಾಗವಹಿಸಿದ್ದರು. ಇದರ ಮುಂದುವರಿದ ಭಾಗವಾಗಿ ಅಯೋಧ್ಯೆಯಲ್ಲಿ ಶೀಘ್ರವೇ ದೊಡ್ಡ ಸಭೆಯೊಂದು ನಡೆಯಲಿದೆ ಎಂದೂ ಅದು ಹೇಳಿದೆ.
ಸಭೆಯಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕಾರ್ಯಕಾರಿ ಸದಸ್ಯ ಮೌಲಾನ ಸೈಯ್ಯದ್ ಸಲ್ಮಾನ್ ಹುಸೇನ್ ನದ್ವಿ, ಉತ್ತರಪ್ರದೇಶ ಸುನ್ನಿ ವಕ್ಫ್ ಮಂಡಳಿ ಅಧ್ಯಕ್ಷ ಜಫರ್ ಅಹ್ಮದ್ ಫಾರೂಕಿ, ಲಕ್ನೊ ತೀಲಾಯ್ ವಾಲ್ ಮಸೀದಿಯ ಮೌಲಾನ ವಾಸಿಫ್ ಹಸನ್ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಡಾ. ಅನೀಸ್ ಅನ್ಸಾರಿ, ಸೆಂಟರ್ ಫಾರ್ ಆಬ್ಜೆಕ್ಟಿವ್ ರೀಸರ್ಚ್ ಅಂಡ್ ಡೆವಲಪ್ಮೆಂಟ್ (ಸಿಇಆರ್ಡಿ) ನಿರ್ದೇಶಕ ಎ.ಆರ್.ರೆಹಮಾನ್, ಲಂಡನ್ ಮೂಲದ ವಿಶ್ವ ಇಸ್ಲಾಂ ವೇದಿಕೆ ಅಧ್ಯಕ್ಷ ಮೌಲಾನ ಇಸಾ ಮನ್ಸೂರಿ, ಲಖನೌ ವಕೀಲ ಇಮ್ರಾನ್ ಅಹಮದ್, ಭಾರತೀಯ ಹಜ್ ಸಮಿತಿ ಅಧ್ಯಕ್ಷ ಎ ಅಬೂಬಕ್ಕರ್ ಮತ್ತು ಬೆಂಗಳೂರಿನ ಡಾ.ಮೂಸ ಕೈಸರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.