ಮಂಗಳೂರು: ‘ಜನ್ಮದಿನದ ಮೋಜುಕೂಟ ಮುಗಿಸಿ ವಾಪಸಾಗುತ್ತಿದ್ದ ವೇಳೆ ಕಾರನ್ನು ಅಡ್ಡಗಟ್ಟಿದ ತಂಡವೊಂದು ನಮ್ಮ ಮೇಲೆ ಹಲ್ಲೆ ನಡೆಸಿ ಡಕಾಯಿತಿಗೆ ಯತ್ನಿಸಿದೆ’ ಎಂದು ಇಂಡಿಗೋ ಏರ್ಲೈನ್ಸ್ನ ಇಬ್ಬರು ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಳೆಂದು ಹೆಸರಿಸಿರುವ ಯುವಕರು ಇಂಡಿಗೋ ಸಿಬ್ಬಂದಿ ವಿರುದ್ಧ ಪ್ರತಿದೂರು ನೀಡಿದ್ದಾರೆ.
‘ಆದ್ಯಪಾಡಿ ರಸ್ತೆಯಲ್ಲಿ ಕಾರು ಅಡ್ಡಗಟ್ಟಿದ ಐವರು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಕತ್ತಿನಲ್ಲಿದ್ದ ಚಿನ್ನದ ಸರ ದೋಚಲು ಯತ್ನಿಸಿದ್ದಾರೆ. ಎಟಿಎಂ ಕಾರ್ಡ್ ಕಿತ್ತುಕೊಂಡು ಬಲವಂತದಿಂದ ಪಿನ್ ಸಂಖ್ಯೆ ಪಡೆದರು. ಅದನ್ನು ಬಳಸಿ ಹಣ ಡ್ರಾ ಮಾಡಿದ್ದಾರೆ’ ಎಂದು ವಿನೀತ್ ಮತ್ತು ಪೂಜಾ ಬಜ್ಪೆ ಠಾಣೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಯುವಕರ ಪ್ರತಿದೂರು: ‘ನಾವು ಮನೆಗೆ ವಾಪಸಾಗುತ್ತಿದ್ದ ವೇಳೆ ಆದ್ಯಪಾಡಿ ರಸ್ತೆಯ ನಿರ್ಜನ ರಸ್ತೆಯಲ್ಲಿ ಕಾರೊಂದು ನಿಂತಿತ್ತು. ಅದರಲ್ಲಿ ಯಾರಿದ್ದಾರೆ ಎಂದು ನೋಡಲು ಪ್ರಯತ್ನಿಸಿದೆವು. ಆಗ ಚಾಲಕನ ಸೀಟಿನಲ್ಲಿದ್ದ ಯುವಕ ಗಾಬರಿಯಿಂದ ಕಾರು ಚಲಾಯಿಸಿಕೊಂಡು ಮುಂದಕ್ಕೆ ಹೋಗಲು ಯತ್ನಿಸಿದ್ದಾರೆ. ಆ ಸಮಯದಲ್ಲಿ ಕಾರು ಒಂದು ಬೈಕ್ಗೆ ಡಿಕ್ಕಿಯಾಗಿದೆ. ಬೈಕ್ಗೆ ಹಾನಿಯಾಗಿರುವುದರಿಂದ ನಷ್ಟದ ಮೊತ್ತ ನೀಡುವಂತೆ ಕೇಳಿದೆವು. ನಗದು ಇಲ್ಲ ಎಂದು ಹೇಳಿದ ಯುವತಿ ಎಟಿಎಂ ಕಾರ್ಡ್ ನೀಡಿ, ಪಿನ್ ಸಂಖ್ಯೆ ನೀಡಿದ್ದರು’ ಎಂದು ಯುವಕರು ಪ್ರತಿದೂರಿನಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.