ಬೆಂಗಳೂರು: ವಿಧಾನಸೌಧದ ವಜ್ರ ಮಹೋತ್ಸವದ ನಿಮಿತ್ತ ವಿಧಾನಸೌಧ ಕುರಿತು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಸಂಯೋಜಿಸಿರುವ ವಿಶೇಷ ಗೀತೆಯನ್ನು 60 ಗಾಯಕರು ಹಾಡಲಿದ್ದಾರೆ.
ಇದೇ 25ರಂದು ನಡೆಯುವ ವಜ್ರಮಹೋತ್ಸವದಲ್ಲಿ ಸಂಜೆ ವಿಧಾನಸೌಧದ ಪೂರ್ವದ್ವಾರದ ಮೆಟ್ಟಿಲುಗಳ ಮೇಲೆ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ವಿಧಾನಸೌಧ ಕುರಿತು ಹಂಸಲೇಖ ಮೂರು ಗೀತೆಗಳನ್ನು ವಿಶೇಷವಾಗಿ ರಚಿಸಿದ್ದಾರೆ.
‘ವಿಧಾನಸೌಧಕ್ಕೆ 60 ವರ್ಷ ತುಂಬಿರುವುದು ಅತ್ಯಂತ ಮಹತ್ವದ ಘಟ್ಟ. ಇದರ ಸವಿನೆನಪಿಗಾಗಿ ವಿಧಾನಸೌಧ, ಅದರ ವಾಸ್ತುಶಿಲ್ಪ, ಶಾಸಕಾಂಗ ಕುರಿತಂತೆ ಮೂರು ಗೀತೆಗಳನ್ನು ವಿಶೇಷವಾಗಿ ರಚಿಸಿ ಸಂಗೀತ ಸಂಯೋಜನೆ ಮಾಡಲಾಗಿದೆ. ಇದಕ್ಕೆ ಪೂರಕವಾಗಿ 60 ಗಾಯಕರಿಂದ ಒಂದೇ ಕಂಠದಲ್ಲಿ ಆ ಗೀತೆಗಳನ್ನು ಹಾಡಿಸಲಾಗುತ್ತಿದೆ’ ಎಂದು ಹಂಸಲೇಖ ‘ಪ್ರಜಾವಾಣಿ’ಗೆ ತಿಳಿಸಿದರು.
ರಸಮಂಜರಿಗಾಗಿ ಸಂಜೆ 6.30ರಿಂದ 7.30ರವರೆಗೆ ಸಮಯ ನೀಡಲಾಗಿದೆ. ಈ ಸಂದರ್ಭದಲ್ಲಿ ಬೇರೆ ಬೇರೆ ಸಿನಿಮಾಗಳಿಂದ ಆಯ್ಕೆ ಮಾಡಿಕೊಂಡಿರುವ 12 ಗೀತೆಗಳನ್ನೂ ಪ್ರಸ್ತುತಪಡಿಸಲಾಗುತ್ತದೆ. ಇದಕ್ಕಾಗಿ ಗಾಯಕರಿಗೆ ವಿಶೇಷವಾಗಿ ತರಬೇತಿ ನೀಡಲಾಗಿದೆ. ಸುಮಾರು 20 ಮಂದಿ ವಾದ್ಯಗಾರರೂ ಇರುತ್ತಾರೆ ಎಂದೂ ಹಂಸಲೇಖ ವಿವರಿಸಿದರು.
**
ವಿಧಾನಸೌಧ ಕುರಿತು ಹಂಸಲೇಖ ರಚಿಸಿರುವ ಗೀತೆಯ ಪಲ್ಲವಿ:
‘ಕರ್ನಾಟಕದ ಹೆಜ್ಜಾನಪದ
ಕನ್ನಡಿಗರ ಹೃದಯದ ಕದ
ಸುಧಾರಣೆಯ ಸುಜ್ಞಾನಸೌಧ
ವಾಸ್ತುಕಲೆಯ ಭವ್ಯಬೋಧ
ವಿಧಾನಸೌಧ
ಷಷ್ಟಬ್ಧಿಯ ವಿಧಾನಸೌಧ’
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.