ADVERTISEMENT

60 ರೂಪಾಯಿ ಆಸೆ: ಜಾಗೃತ ದಳಕ್ಕೆ ಸಿಕ್ಕಿಬಿದ್ದ ಶಿಕ್ಷಕರು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 19:59 IST
Last Updated 9 ಏಪ್ರಿಲ್ 2013, 19:59 IST

ಮಧುಗಿರಿ: ದಿನಕ್ಕೆ ಅರವತ್ತು ರೂಪಾಯಿ ಆಸೆಗೆ ಸರ್ಕಾರಿ ಶಿಕ್ಷಕನಲ್ಲದಿದ್ದರೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕೊಠಡಿ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಸುತ್ತಿದ್ದ ಅತಿಥಿ ಶಿಕ್ಷಕರೊಬ್ಬರು ಜಾಗೃತ ದಳಕ್ಕೆ ಸಿಕ್ಕಿಬಿದ್ದ ಘಟನೆ ಪಟ್ಟಣದ ಎಂಜಿಎಂ ಪ್ರೌಢಶಾಲೆಯಲ್ಲಿ ಬುಧವಾರ ನಡೆದಿದೆ.

ಅಕ್ರಮದಲ್ಲಿ ಸಿಕ್ಕಿ ಬಿದ್ದವ ಗೌರಿಬಿದನೂರು ತಾಲ್ಲೂಕಿನ ರಮಾಪುರ ಪ್ರೌಢಶಾಲೆಯ ಶಿಕ್ಷಕ ರಂಗನಾಥ್ ಎಂದು ಗುರುತಿಸಲಾಗಿದೆ. ಪರೀಕ್ಷಾ ಮೇಲ್ವಿಚಾರಕರಾಗಿ ಆಯಾಯ ತಾಲ್ಲೂಕಿನ ಶಿಕ್ಷಕರೇ ಕೆಲಸ ನಿರ್ವಹಿಸಬೇಕೆಂಬ ನಿಯಮವಿದೆ. ಆದರೆ ಇಲ್ಲಿನ ಗಂಜಲಗುಂಟೆ ಖಾಸಗಿ ಅನುದಾನಿತ ಪ್ರೌಢಶಾಲೆಯ ಶಿಕ್ಷಕ ವೆಂಕಟೇಶ್ ದಿನಕ್ಕೆ 60 ರೂಪಾಯಿ ಕೊಡುವ ಆಸೆ ಹುಟ್ಟಿಸಿ ಈತನನ್ನು ಕೆಲಸ ನಿರ್ವಹಿಸಲು ಹೇಳಿದ್ದ ಎಂದು ಹೇಳಲಾಗಿದೆ.

ಪರೀಕ್ಷಾ ಕೆಲಸಕ್ಕೆ ಮತ್ತೊಬ್ಬ ಶಿಕ್ಷಕ ಅಗತ್ಯವಿದ್ದುದನ್ನು ಮನಗಂಡು ವೆಂಕಟೇಶ್ ಪರೀಕ್ಷಾ ಅಧಿಕಾರಿಗಳಿಗೆ ಸುಳ್ಳು ಹೇಳಿ ಸ್ನೇಹಿತನಾಗಿದ್ದ ರಂಗನಾಥ್‌ನನ್ನು ಕರೆ ತಂದಿದ್ದ ಎಂದು ಹೇಳಲಾಗಿದೆ.

ಡಿಡಿಪಿಐ ಆಂಜನಪ್ಪ ಶಾಲೆಗೆ ಭೇಟಿ ನೀಡಿದಾಗ ಕರ್ತವ್ಯ ನಿರ್ವಹಿಸುತ್ತಿದ್ದ ರಂಗನಾಥ್‌ನ ಬಗ್ಗೆ ಅನುಮಾನಗೊಂಡು ಪ್ರಶ್ನೆ ಮಾಡಿದಾಗ ತಬ್ಬಿಬ್ಬಾದ ಆತ ಕೊನೆಗೆ ನಿಜ ಉತ್ತರ ಹೇಳಿದ. ಕೊನೆಗೆ ಈ ಇಬ್ಬರೂ ಶಿಕ್ಷಕರಿಂದ ತಪ್ಪೊಪ್ಪಿಗೆ ಬರೆಯಿಸಿಕೊಂಡು ಬಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT