ಮಂಡ್ಯ: ‘ರಾಜ್ಯ ರೈತಸಂಘದ ಹೋರಾಟವನ್ನು ಮುನ್ನಡೆಸುವ ಸಂಕಲ್ಪದೊಂದಿಗೆ ಕೆ.ಎಸ್.ಪುಟ್ಟಣ್ಣಯ್ಯ ಅವರಿಗೆ ಹಸಿರು ನಮನ ಸಲ್ಲಿಸುವ ರಾಜ್ಯ ಮಟ್ಟದ ಶ್ರದ್ಧಾಂಜಲಿ ಸಭೆ ಮಾರ್ಚ್ 8ರಂದು ಪಾಂಡವಪುರದ ಪಾಂಡವ ಕ್ರೀಡಾಂಗಣದಲ್ಲಿ ನಡೆಯಲಿದೆ’ ಎಂದು ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಇಲ್ಲಿ ಸೋಮವಾರ ಹೇಳಿದರು.
‘ನನ್ನ ತಂದೆ ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರು ಹಾಕಿಕೊಟ್ಟ ಮಾರ್ಗ, ಚಿಂತನೆಗಳು ಹಸಿರಾಗಿವೆ. ಅವರ ಹೋರಾಟದ ಹಾದಿಯನ್ನು ಮುಂದುವರಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು. ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿ ಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಪಾಲ್ಗೊಳ್ಳುವರು’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಸ್ವರಾಜ್ ಇಂಡಿಯಾ ಪಕ್ಷದಿಂದ ಮುಂಬರುವ ಚುನಾವಣೆಗೆ ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಸಿದ್ಧ
ವಾಗಿತ್ತು. ಅದರಲ್ಲಿ ಮೊದಲ ಹೆಸರೇ ಪುಟ್ಟಣ್ಣಯ್ಯ ಅವರದಾಗಿತ್ತು. ಫೆ.27ರಂದು ಪಟ್ಟಿ ಪ್ರಕಟಿಸುವ ಯೋಚನೆ ಪಕ್ಷದ ಮುಖಂಡರಲ್ಲಿ ಇತ್ತು. ಆದರೆ ಅವರು ನಿಧನರಾದ ಕಾರಣ ಪ್ರಕ್ರಿಯೆ ಮುಂದಕ್ಕೆ ಹೋಗಿದೆ. ಮಾರ್ಚ್ 15 ರೊಳಗೆ ಪಟ್ಟಿ ಪ್ರಕಟವಾಗುವ ನಿರೀಕ್ಷೆ ಇದೆ’ ಎಂದು ರೈತಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.