ADVERTISEMENT

8 ರಂದು ವಿಟಿಯು ಘಟಿಕೋತ್ಸವ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2012, 19:30 IST
Last Updated 5 ಏಪ್ರಿಲ್ 2012, 19:30 IST

ಬೆಳಗಾವಿ: “ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಜ್ಞಾನ ಸಂಗಮ ಕ್ಯಾಂಪಸ್‌ನಲ್ಲಿ ಏ. 8ರಂದು ನಡೆಯಲಿರುವ 11ನೇ ಘಟಿಕೋತ್ಸವ ಮುಖ್ಯ ಭಾಷಣ ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಮಾಡಲಿದ್ದಾರೆ” ಎಂದು ಕುಲಪತಿ ಡಾ. ಎಚ್.ಮಹೇಶಪ್ಪ ಗುರುವಾರ ಇಲ್ಲಿ ತಿಳಿಸಿದರು.

“ಪ್ರಸಕ್ತ ಘಟಿಕೋತ್ಸವದಲ್ಲಿ ಮುಂಬೈನ ಆದಿತ್ಯಾ ಬಿರ್ಲಾ ಗ್ರೂಪ್ ಅಧ್ಯಕ್ಷ ಕುಮಾರ ಮಂಗಲಮ್ ಬಿರ್ಲಾ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷ ಡಾ.ಎಸ್.ಎಸ್.ಮಂಥಾ, ರೂರ್ಕಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎಚ್.ಸಿ.ವಿಶ್ವೇಶ್ವರಯ್ಯ ಹಾಗೂ ಗೋಕುಲ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ದಿ. ಎಂ.ಎಸ್.ರಾಮಯ್ಯ (ಮರಣೋತ್ತರ) ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು” ಎಂದು ಗೋಷ್ಠಿಯಲ್ಲಿ ತಿಳಿಸಿದರು.

ಕುಲಾಧಿಪತಿ, ರಾಜ್ಯಪಾಲ ಹಂಸರಾಜ ಭಾರಧ್ವಾಜ ಅವರು ಪದವಿ ಪ್ರದಾನ ಮಾಡಲಿದ್ದಾರೆ. ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.ಸಮಾರಂಭದಲ್ಲಿ 53,451 ವಿದ್ಯಾರ್ಥಿಗಳಿಗೆ ಬಿ. ಇ. ಪದವಿ, 278 ವಿದ್ಯಾರ್ಥಿಗಳಿಗೆ ಬಿ. ಆರ್ಕ್ ಪದವಿ, 4,865 ವಿದ್ಯಾರ್ಥಿಗಳಿಗೆ ಎಂ.ಬಿ.ಎ ಪದವಿ, 2,544 ವಿದ್ಯಾರ್ಥಿಗಳಿಗೆ ಎಂ.ಸಿ.ಎ. ಪದವಿ, 2,711 ವಿದ್ಯಾರ್ಥಿಗಳಿಗೆ ಎಂ.ಟೆಕ್, 10 ವಿದ್ಯಾರ್ಥಿಗಳಿಗೆ ಎಂ. ಆರ್ಕ್ ಪದವಿ, 100 ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಪದವಿ ಮತ್ತು 9 ವಿದ್ಯಾರ್ಥಿಗಳಿಗೆ ಎಂ. ಎಸ್ಸಿ ಪದವಿಗಳನ್ನು ಪ್ರದಾನ ಮಾಡಲಾಗುವುದು ಎಂದು ವಿವರ ನೀಡಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.