ಕುಂದಾಪುರ: ಎರಡು ದಿನಗಳ ಹಿಂದೆ ಸರ್ಕಾರದ ವರ್ಗಾವಣೆ ಆದೇಶದ ಹಿನ್ನೆಲೆಯಲ್ಲಿ ನೂತನ ಉಪ ವಿಭಾಗಾಧಿಕಾರಿಗೆ ಅಧಿಕಾರ ಹಸ್ತಾಂತರ ಮಾಡಿದ್ದ ಕುಂದಾಪುರ ಕಂದಾಯ ಉಪ ವಿಭಾಗದ ಉಪ ವಿಭಾಗಾಧಿಕಾರಿ ಡಾ.ಎಸ್.ಎಸ್.ಮಧುಕೇಶ್ವರ ಅವರ ಮನೆಯ ಮೇಲೆ ಗುರುವಾರ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಹಿರಿಯ ಕೆಎಎಸ್ ಶ್ರೇಣಿ ಅಧಿಕಾರಿಯಾಗಿದ್ದ ಮಧುಕೇಶ್ವರ ಅವರು ಮಂಗಳವಾರ ನೂತನ ಉಪ ವಿಭಾಗಾಧಿಕಾರಿಯಾಗಿ ಬಂದಿದ್ದ ಎ.ರಾಜು ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ್ದರು. ಅಧಿಕಾರ ಹಸ್ತಾಂತರಿಸಿದ ಬಳಿಕವೂ ಉಪ ವಿಭಾಗಾಧಿಕಾರಿ ಕಚೇರಿಗೆ ಸಂಬಂಧಿಸಿದ ಕಡತಗಳನ್ನು ಮಿನಿ ವಿಧಾನಸೌಧಕ್ಕೆ ಸಮೀಪದಲ್ಲಿರುವ ಉಪ ವಿಭಾಗಾಧಿಕಾರಿಗಳ ಅಧಿಕೃತ ನಿವಾಸದಲ್ಲಿ ವಿಲೇವಾರಿ ಮಾಡುತ್ತಿದ್ದಾರೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಎಸಿಬಿ ತಂಡ ದಾಳಿ ನಡೆಸಿದೆ.
ಎಸಿಬಿ ಡಿವೈಎಸ್ಪಿ ಮಂಜುನಾಥ ಕವರಿ ಅವರ ನೇತೃತ್ವದ ತಂಡ ನಡೆಸಿದ ದಾಳಿ ವೇಳೆ, ಕಂದಾಯ ಇಲಾಖೆಗೆ ಸಂಬಂಧಿಸಿದ 23 ಅಧಿಕೃತ ಕಡತಗಳು ಹಾಗೂ ₹1.28 ಲಕ್ಷ ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಎಸಿಬಿ ತಂಡ ಗುರುವಾರ ರಾತ್ರಿಯವರೆಗೂ ದಾಖಲೆಗಳ ಪರಿಶೀಲನೆ ಮುಂದುವರಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.