ADVERTISEMENT

ಸ್ವಾಮಿ, ಗೌಡಯ್ಯಗೆ ಎಸಿಬಿ ನೋಟಿಸ್‌

ಮಂಗಳವಾರ ವಿಚಾರಣೆಗೆ ಹಾಜರಾಗಲು ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2018, 18:06 IST
Last Updated 7 ಅಕ್ಟೋಬರ್ 2018, 18:06 IST

ಬೆಂಗಳೂರು: ಆದಾಯ ಮೀರಿ ಸಿಕ್ಕಾಪಟ್ಟೆ ಆಸ್ತಿ ಸಂಪಾದಿಸಿ, ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಿಕ್ಕಿಬಿದ್ದಿರುವ ಕೆಎಐಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್‌. ಸ್ವಾಮಿ ಮತ್ತು ಬಿಡಿಎ ಎಂಜಿನಿಯರ್ ಆಫೀಸರ್‌ ಎನ್.ಜಿ ಗೌಡಯ್ಯ ಅವರಿಗೆ ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿದೆ.

ಸ್ವಾಮಿ ಮತ್ತು ಅವರ ಕುಟುಂಬದ ಸದಸ್ಯರು ಶನಿವಾರವೇ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ, ಅನಾರೋಗ್ಯ ನಿಮಿತ್ತ ಸ್ವಾಮಿ ಆಸ್ಪತ್ರೆ ಸೇರಿದ್ದರಿಂದ ಗೈರು ಹಾಜರಾದರು. ವಿಚಾರಣೆಗೆ ಹಾಜರಾಗಿದ್ದ ಗೌಡಯ್ಯ ಮತ್ತು ಅವರ ಪತ್ನಿಯನ್ನು ಕೆಲವು ಗಂಟೆ ಅಧಿಕಾರಿಗಳು ಪ್ರಶ್ನಿಸಿದರು. ವಿಚಾರಣೆ ಮಂಗಳವಾರವೂ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ.

ಮಲ್ಲೇಶ್ವರದ ‘ಮಂತ್ರಿ ಗ್ರೀನ್ಸ್‌ ಅಪಾರ್ಟ್‌ಮೆಂಟ್‌’ನಲ್ಲಿರುವ ಸ್ವಾಮಿ ಅವರ ಮನೆ ಬಾಗಿಲಿಗೆ ನೋಟಿಸ್‌ ಅಂಟಿಸಲಾಗಿದೆ. ಈ ನೋಟಿಸ್‌ನಲ್ಲಿ ವಿಚಾರಣೆಗೆ ಹಾಜರಾಗುವಂತೆ ಹೇಳಲಾಗಿದೆ.

ADVERTISEMENT

ಎಸಿಬಿ ಅಧಿಕಾರಿಗಳು ಶುಕ್ರವಾರ ಬೆಳಗಿನ ಜಾವ ಏಕಕಾಲಕ್ಕೆ ಎಂಟು ಕಡೆ ದಾಳಿ ನಡೆಸಿದರು. ಸ್ವಾಮಿ ಅವರ ಮನೆಯಲ್ಲಿ ₹ 4.5 ಕೋಟಿ ನಗದು, ಗೌಡಯ್ಯ ಅವರ ಮನೆಯಲ್ಲಿ 18.2 ಕೆ.ಜಿ ಚಿನ್ನಾಭರಣ ಸೇರಿದಂತೆ ಭಾರಿ ಪ್ರಮಾಣದ ಅಕ್ರಮ ಆಸ್ತಿ ಪತ್ತೆ ಆಗಿದೆ.

ಅಕ್ರಮ ಆಸ್ತಿಪಾಸ್ತಿಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ಪರಿಶೀಲಿಸುತ್ತಿರುವ ಅಧಿಕಾರಿಗಳು ಇಬ್ಬರ ಆದಾಯ ಮೂಲ ಕುರಿತು ತನಿಖೆ ನಡೆಸುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆಯೂ ಈ ಪ್ರಕರಣದ ವಿಚಾರಣೆ ನಡೆಸುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.