ADVERTISEMENT

ಮೂವರು ಅಧಿಕಾರಿಗಳ ಮನೆಗಳಲ್ಲಿ ಎಸಿಬಿ ಶೋಧ

ಆದಾಯ ಮೀರಿ ಆಸ್ತಿ ಹೊಂದಿರುವ ಆರೋಪ

​ಪ್ರಜಾವಾಣಿ ವಾರ್ತೆ
Published 12 ಜೂನ್ 2019, 15:47 IST
Last Updated 12 ಜೂನ್ 2019, 15:47 IST
ಧಾರವಾಡದ ಶ್ರೀನಗರ ಬಳಿ ಇರುವ ಪ್ರೊ. ಕಲ್ಲಪ್ಪ ಹೊಸಮನಿ ಮನೆಗೆ ಎಸಿಬಿ ಅಧಿಕಾರಿಗಳು ಬುಧವಾರ ಭೇಟಿ ನಿಡಿ ಪರಿಶೀಲನೆ ನಡೆಸಿದರು
ಧಾರವಾಡದ ಶ್ರೀನಗರ ಬಳಿ ಇರುವ ಪ್ರೊ. ಕಲ್ಲಪ್ಪ ಹೊಸಮನಿ ಮನೆಗೆ ಎಸಿಬಿ ಅಧಿಕಾರಿಗಳು ಬುಧವಾರ ಭೇಟಿ ನಿಡಿ ಪರಿಶೀಲನೆ ನಡೆಸಿದರು   

ಬೆಂಗಳೂರು: ಆದಾಯ ಮೀರಿ ಆಸ್ತಿ ಹೊಂದಿರುವ ಆರೋಪದ ಮೇಲೆ ಕರ್ನಾಟಕ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆಗಿದ್ದ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಕಲ್ಲಪ್ಪ ಹೊಸಮನಿ ಅವರೂ ಸೇರಿದಂತೆ ವಿವಿಧ ಇಲಾಖೆಗಳ ಮೂವರು ಅಧಿಕಾರಿಗಳ ಕಚೇರಿ ಮತ್ತು ಮನೆಗಳ ಮೇಲೆ ‘ಭ್ರಷ್ಟಾಚಾರ ನಿಗ್ರಹ ದಳ’ (ಎಸಿಬಿ) ಅಧಿಕಾರಿಗಳು ಬುಧವಾರ ಬೆಳಗಿನ ಜಾವ ದಾಳಿ ನಡೆಸಿದ್ದಾರೆ.

ಜೋಯಿಡಾ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಉದಯ್‌ ಛಬ್ಬಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಂಗಳೂರಿನ ಸಹಾಯಕ ಎಂಜಿನಿಯರ್‌ ಮಹದೇವಪ್ಪ ಅವರ ಮನೆ, ಕಚೇರಿಗಳನ್ನು ಶೋಧಿಸಲಾಗಿದೆ. ಅಧಿಕಾರಿಗಳ ಮನೆಗಳಲ್ಲಿ ಹಣ, ಚಿನ್ನಾಭರಣ ಮತ್ತು ಆಸ್ತಿಪಾಸ್ತಿಗೆ ಸಂಬಂಧಿಸಿದ ದಾಖಲೆಗಳು ಸಿಕ್ಕಿದ್ದು, ಪರಿಶೀಲನೆ ನಡೆಯುತ್ತಿದೆ.

ಹೊಸಮನಿ ಅವರಧಾರವಾಡದ ಶ್ರೀನಗರ, ಗುಲಗಂಜಿಕೊಪ್ಪದ ಮನೆಗಳು ಹಾಗೂ ಕಚೇರಿ, ಉದಯ್‌ ಛಬ್ಬಿ ಅವರ ಬೆಳಗಾವಿ, ದಾಂಡೇಲಿ ಮನೆಗಳು ಹಾಗೂ ಜೋಯಿಡಾ ಕಚೇರಿ, ಮಹದೇವಪ್ಪನವರ ಯಶವಂತಪುರ ಬಳಿಯ ಸಿಡೇದಹಳ್ಳಿ ಮತ್ತು ಕದ್ರಿ ಪಾದೆ ಮನೆಗಳ ಮೇಲೆ ಬೆಳಗಿನ ಜಾವ ಏಕಕಾಲಕ್ಕೆ ದಾಳಿ ನಡೆದಿದೆ.

ADVERTISEMENT

ದಾಳಿ ಕಾರ್ಯಾಚರಣೆಯಲ್ಲಿ 130 ಎಸಿಬಿ ಅಧಿಕಾರಿಗಳನ್ನು ಒಳಗೊಂಡ 11 ತಂಡಗಳು ಭಾಗವಹಿಸಿದ್ದವು. ಐಜಿ ಚಂದ್ರಶೇಖರ್‌ ಹಾಗೂ ಎಸ್‌ಪಿ ಡಾ. ಸಂಜೀವ್‌ ಪಾಟೀಲ, ಪಶ್ಚಿಮ ವಲಯದ ಎಸ್‌ಪಿ ಉಮಾ ಪ್ರಶಾಂತ್‌ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಯಿತು.

ಮಹದೇವಪ್ಪ ಆಸ್ತಿ

5 ನಿವೇಶನ, 2 ಮನೆ, ಚಿತ್ರದುರ್ಗ, ಚಿಕ್ಕಮಗಳೂರಿನಲ್ಲಿ 18 ಎಕರೆ ಕೃಷಿ ಭೂಮಿ, ₹ 3 ಲಕ್ಷ ಹಣ, 2,150 ಅಮೆರಿಕನ್‌ ಡಾಲರ್‌, 4,800 ಹಾಂಕಾಂಗ್‌ ಡಾಲರ್‌, ಬ್ಯಾಂಕ್‌ ಖಾತೆಗಳಲ್ಲಿ ₹ 6.50 ಲಕ್ಷ ಹಣ, 12 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಎಲ್‌ಐಸಿ ಪಾಲಿಸಿಗಳು

ಉದಯ್‌ ಛಬ್ಬಿ ಆಸ್ತಿ

ಮನೆ, 3 ನಿವೇಶನ, ಬ್ಯಾಂಕ್‌ ಖಾತೆಗಳಲ್ಲಿ ₹ 11 ಲಕ್ಷ ನಗದು, ₹ 31.50 ಲಕ್ಷ ಮೌಲ್ಯದ ಚಿನ್ನಾಭರಣ. ಹೊಸಮನಿ ಅವರ ಆಸ್ತಿಪಾಸ್ತಿ ಕುರಿತು ಪರಿಶೀಲನೆ ನಡೆಯುತ್ತಿದೆ.

ಹೊಸಮನಿ ಆಸ್ತಿ

1 ಮನೆ, ಅತ್ತೆ, ಮಾವ ಮತ್ತು ಪತ್ನಿಯ ಹೆಸರಿನಲ್ಲಿ 41 ಎಕರೆ ಜಮೀನು, 2 ಕಾರು, 2 ಸ್ಕೂಟರ್‌, 1 ಟ್ರ್ಯಾಕ್ಟರ್‌, 200 ಗ್ರಾಂ ಚಿನ್ನ ಮತ್ತು 1,200 ಗ್ರಾಂ ಬೆಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.