ADVERTISEMENT

ಹೆಣದ ಮೇಲೆ ಹಣ ಮಾಡಬೇಡಿ: ಎಚ್.ವಿಶ್ವನಾಥ್‌

​ಪ್ರಜಾವಾಣಿ ವಾರ್ತೆ
Published 19 ಮೇ 2021, 19:30 IST
Last Updated 19 ಮೇ 2021, 19:30 IST
ಎಚ್.ವಿಶ್ವನಾಥ್
ಎಚ್.ವಿಶ್ವನಾಥ್   

ಮೈಸೂರು: ‘ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಹತ್ತು ಪೈಸೆ ಖರ್ಚು ಮಾಡುವ ಅಧಿಕಾರವೂ ಇಲ್ಲವಾಗಿದೆ. ಖರ್ಚು ಮಾಡುವ ಅಧಿಕಾರವಿದ್ದರೆ, ಅದು ವಿಜಯೇಂದ್ರನಿಗೆ ಮಾತ್ರ. ಪ್ರತಿ ಬಿಲ್‌ ಅನ್ನು ಬೆಂಗಳೂರಿಗೆ ಕಳುಹಿಸಬೇಕಾದ ಪರಿಸ್ಥಿತಿ ಇದೆ’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಬುಧವಾರ ಇಲ್ಲಿ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಳ್ಳಿಗಳಲ್ಲಿ ಸೋಂಕು ಹೆಚ್ಚುತ್ತಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ. ಮಾತ್ರೆಯೂ ಸಿಗುತ್ತಿಲ್ಲ. ಅದಕ್ಕೂ ಬೆಂಗಳೂರಿಗೆ ಹೋಗಬೇಕಿದೆ. ಒಬ್ಬರೇ ಅಧಿಕಾರವನ್ನು ಹಿಡಿದುಕೊಂಡಿರುವುದರಿಂದ ಈ ಸಮಸ್ಯೆ ಸೃಷ್ಟಿಯಾಗಿದೆ. ಪರ್ಸೆಂಟೇಜ್‌ಗಾಗಿ ಎಲ್ಲಾ ಅಧಿಕಾರ ಒಂದು ಕಡೆ ಕೇಂದ್ರೀಕೃತವಾಗಿದೆ. ಸರ್ಕಾರ ನಡೆಸುವ ಮಂದಿ ಹೆಣದ ಮೇಲೆ ದುಡ್ಡು ಎತ್ತಲು ಹೋಗಬಾರದು. ಇದು ಒಳ್ಳೆಯದಲ್ಲ’ ಎಂದು ಹರಿಹಾಯ್ದರು.

‘ಸಮರ್ಥವಾಗಿ ಕೋವಿಡ್‌ ನಿರ್ವಹಿಸಲುಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಕಾರ್ಯದರ್ಶಿ ದರ್ಜೆಯ ಅಧಿಕಾರಿಗಳನ್ನು ಪ್ರತಿ ಜಿಲ್ಲೆಗೆ ನಿಯೋಜಿಸಬೇಕು. ಅವರಿಗೆ ಸಂಪೂರ್ಣ ಅಧಿಕಾರ ನೀಡಿ, ಹಣ ಬಳಸಲು ಅವಕಾಶ ಕೊಡಬೇಕು. ಪ್ರತಿ ಜಿಲ್ಲೆಗೆ ₹ 100 ಕೋಟಿ ಮೀಸಲಿಡಿ. ಅವರ ಕೆಳಗೆ ಜಿಲ್ಲಾಧಿಕಾರಿಗಳು ಕೆಲಸ ಮಾಡಲಿ. ಆಮೇಲೆ ಬೇಕಾದರೆ ಅಧಿಕಾರಿಗಳನ್ನು ಪ್ರಶ್ನಿಸಿ’ ಎಂದು ಸಲಹೆ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.