ಮೈಸೂರು: ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋತು ಸುಣ್ಣವಾಗಲಿದ್ದು, ಸಿದ್ದರಾಮಯ್ಯ ‘ವೈಟ್ವಾಶ್’ ಆಗುವರು ಎಂದು ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ವ್ಯಂಗ್ಯವಾಡಿದರು.
‘ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ಗೆ ಇದು ಮೂರನೇ ಚುನಾವಣೆ. ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಸೋತರು. ಉಪಚುನಾವಣೆಯಲ್ಲೂ ಸೋಲು ಎದುರಾಗಲಿದೆ. ಕ್ರಿಕೆಟ್ನಲ್ಲಿ ಸರಣಿಯ ಎಲ್ಲ ಮೂರು ಪಂದ್ಯಗಳಲ್ಲಿ ಸೋತರೆ ‘ವೈಟ್ವಾಶ್’ ಅನ್ನುವರು. ಸಿದ್ದರಾಮಯ್ಯ ಅವರೂ ಉಪಚುನಾವಣೆ ಬಳಿಕ ಕಾಂಗ್ರೆಸ್ಗೆ ಬಿಳಿ ಬಣ್ಣ ಬಳಿದು ಮನೆಗೆ ಹೋಗುವರು’ ಎಂದು ಮೈಸೂರಿನಲ್ಲಿ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.
ರಾಜ್ಯದಲ್ಲಿ ದೋಸ್ತಿ ಸರ್ಕಾರ ಇರಲಿಲ್ಲ. ದುಷ್ಮನ್ ಸರ್ಕಾರ ಇತ್ತು. ಕಾಂಗ್ರೆಸ್– ಜೆಡಿಎಸ್ನವರು ಶತ್ರುಗಳಂತೆ ಇದ್ದರು. ಇದೀಗ ಮತ್ತೆ ಒಂದಾಗುವ ರೀತಿಯಲ್ಲಿ ಎಚ್.ಡಿ.ದೇವೇಗೌಡ ಮಾತನಾಡುತ್ತಿದ್ದಾರೆ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಮಹಾಭಾರತದಲ್ಲಿ ಭೀಮನು ಜರಾಸಂಧನ ದೇಹವನ್ನು ಸೀಳಿದ ಬಳಿಕ ಅದು ಒಂದಾಗಲಿಲ್ಲ. ಜನರು ಉಪಚುನಾವಣೆಯಲ್ಲಿ ಜೆಡಿಎಸ್– ಕಾಂಗ್ರೆಸ್ ಮತ್ತೆ ಒಂದಾಗದಂತೆ ತೀರ್ಪು ನೀಡಬೇಕು ಎಂದರು.
ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ ಮತ್ತು ರೇವಣ್ಣ ಏನು ಹೇಳುತ್ತಾರೋ ಗೊತ್ತಿಲ್ಲ. ಅವರು ಯಾವತ್ತಾದರೂ ಹೇಳಿದಂತೆ ನಡೆದುಕೊಂಡಿದ್ದಾರಾ? ಜ್ಯೋತಿಷ್ಯ ಮಂಡಳಿ ಕಟ್ಟಿ ಅದಕ್ಕೆ ರೇವಣ್ಣ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಲೇವಡಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.